ಮಾಸಗಳು ಮತ್ತು ಅದರ ಪ್ರಾಮುಖ್ಯತೆಗಳು

ಜ್ಯೇಷ್ಠ ಮಾಸ

ಮಾಸಗಳಲ್ಲಿ ಮೂರನೆಯ ಮಾಸ ಜ್ಯೇಷ್ಠಮಾಸವಾಗಿದೆ , ಈ ಮಾಸದಲ್ಲಿ ಸೂರ್ಯ ಮಿಥುನ ರಾಶಿಗೆ ಪ್ರವೇಶ ಮಾಡೋದು ವಿಶೇಷ. ಈ ಮಾಸಕ್ಕೆ ಇಂದ್ರ ಅಧಿಪತಿ. ಈ ಮಾಸದ ಹುಣ್ಣಿಮೆ ಜ್ಯೇಷ್ಠಾ ನಕ್ಷತ್ರದಲ್ಲಿ ಬರುತ್ತೆ. ಜ್ಯೇಷ್ಠಾ ನಕ್ಷತ್ರದ ಅಧಿಪತಿ ಇಂದ್ರ. ಈ ಮಾಸದಲ್ಲಿ ಇಂದ್ರನ ಪೂಜೆ ಮಾಡಿದರೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಇನ್ನು ಈ ಮಾಸದಲ್ಲಿ ನೀರಿಗೆ ಅಧಿಪತಿಯಾದವರನ್ನು ಪೂಜಿಸೋದು ವಿಶೇಷವಾಗಿದೆ. ಇನ್ನು ಜ್ಯೇಷ್ಠ ಮಾಸದ ಯಾವ ದಿನ ಯಾವ ದೇವರನ್ನ ಪೂಜಿಸಿದರೆ ಫಲಪ್ರಾಪ್ತಿಯಾಗುತ್ತದೆ ಎನ್ನುವ ವಿವರ ಇಲ್ಲಿದೆ ನೋಡಿ.

ಜ್ಯೇಷ್ಠ ಶುದ್ಧ ಪಾಡ್ಯಮಿ

ಈ ಮಾಸದ ಪಾಡ್ಯಮಿ ದಿನ ತ್ರಿಮೂರ್ತಿಗಳನ್ನು ಪೂಜಿಸಿದರೆ ಒಳಿತಯ ಜಾಸ್ತಿ.

ಇನ್ನು ಇದೇ ದಿನ ಕರವೀರ ವ್ರತ ಮಾಡಬೇಕು. ಕರವೀರ ಅಂದ್ರೆ ಕೆಂಪು ಕಣಗಿಲೆ ಹೂವಿನ ಗಿಡ. ಈಶ್ವರನ ಪ್ರೀತಿಗಾಗಿ ಈ ಗಿಡದಲ್ಲಿ ಶಿವನನ್ನು ಆವಾಹನೆ ಮಾಡಿ ಪೂಜಿಸಿದರೆ ಶಿವನ ಸಂಪೂರ್ಣ ಕೃಪೆ ಸಿಗುತ್ತದೆ.

ಜ್ಯೇಷ್ಠ ಶುದ್ಧ ಬಿದಿಗೆ-ಆರೋಗ್ಯ ವೃದ್ಧಿಗಾಗಿ,ಸೂರ್ಯನ ಅನುಗ್ರಹಕ್ಕಾಗಿ ಈ ಮಾಸದ ಬಿದಿಗೆ ದಿನ ಸೂರ್ಯನನ್ನು ಆರಾಧನೆ ಮಾಡಬೇಕು.

ಜ್ಯೇಷ್ಠ ಶುದ್ಧ ತದಿಗೆ- ಜ್ಯೇಷ್ಠ ಮಾಸದ ತದಿಗೆಯ ದಿನ ಕದಳಿ ವ್ರತ ಮಾಡಿದರೆ ವಿವಾಹವಾಗುವವರಿಗೆ ಹೆಚ್ಚಿನ ಒಳಿತಾಗಲಿದೆ. ಸಾಕ್ಷಾತ್ ಪಾರ್ವತಿ ಶಿವನನ್ನು ವಿವಾಹವಾಗಲು ಈ ವ್ರತ ಮಾಡಿದ್ದಳು.

ಜ್ಯೇಷ್ಠ ಶುದ್ಧ ಚೌತಿ-ಈ ದಿನ ಉಮಾ ಚತುರ್ಥಿ ವಿಶೇಷವಾಗಿದ್ದು, ಉಮಾ ಚತುರ್ಥಿ ಸಾಕ್ಷಾತ್ ಪಾರ್ವತಿ ಹುಟ್ಟಿದ ದಿನ. ಆದ್ದರಿಂದ ಪಾರ್ವತಿಯನ್ನ ಪೂಜೆ ಮಾಡಿದರೆ ಹೆಚ್ಚಿನ ಫಲಪ್ರಾಪ್ತಿಯಾಗಲಿದೆ.

ಜ್ಯೇಷ್ಠ ಶುದ್ಧ ಪಂಚಮಿ-ಜ್ಯೇಷ್ಠ ಶುದ್ಧ ಪಂಚಮಿ ಗಂಗೆ ಹುಟ್ಟಿದ ದಿನ. ಹೀಗಾಗೇ ಈ ದಿನವನ್ನು ಗಂಗಾ ಜಯಂತಿ ಎಂದು ಆಚರಿಸಲಾಗುತ್ತೆ.

ಜ್ಯೇಷ್ಠ ಶುದ್ಧ ಸಪ್ತಮಿ- ಈ ದಿನ ವರುಣನಿಗೆ ಪೂಜೆ ಮಾಡಲಾಗುತ್ತದೆ. ವರುಣ ಮಳೆಗೆ ಅಧಿಪತಿ ಹೀಗಾಗೇ ವ್ಯವಸಾಯಕ್ಕೆ ಸಕಾಲದಲ್ಲಿ ಮಲೆ ಬರಲಿ ಅಂತಾ ವರುಣನನ್ನು ಪೂಜಿಸುತ್ತಾರೆ.

ಜ್ಯೇಷ್ಠ ಶುದ್ಧ ಅಷ್ಟಮಿ

ಈ ದಿನವನ್ನು ತ್ರಿಲೋಚನ ಅಷ್ಟಮಿ ಎನ್ನಲಾಗುತ್ತೆ. ಈಶ್ವರ ಪಾರ್ವತಿಯನ್ನು ಒಟ್ಟಿಗೆ ಪೂಜಿಸೋ ದಿನ ಇದಾಗಿದೆ. ಹೀಗೆ ಶಿವ ಪಾರ್ವತಿಯನ್ನು ಒಟ್ಟಿಗೆ ಪೂಜಿಸಿದರೆ ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುತ್ತವೆ.

ಜ್ಯೇಷ್ಠ ಶುದ್ಧ ದಶಮಿ

ಆಂಜನೇಯನಿಗೆ ವಿವಾಹವಾದ ದಿನವೇ ಜ್ಯೇಷ್ಠ ಶುದ್ಧ ದಶಮಿ. ಸೂರ್ಯನ ಮಗಳು ಸುವರ್ಚಲಾ ದೇವಿಯೊಡನೆ ಹನುಮ ವಿವಾಹವಾದ ದಿನವಿದು. ಇಂದು ವಿವಾಹ ನೆರವೇರಿದರೆ ವಿವಾಹ ಪ್ರತಿಬಂಧಕಗಳು ಪರಿಹಾರವಾಗುವುದರ ಜೊತೆ ವಿವಾಹ ಆಗದೆ ಇರುವವರಿಗೆ ಮದುವೆ ಆಗುವ ಯೋಗ ಲಭಿಸುತ್ತದೆ.

 ನಿರ್ಜಲ ಏಕಾದಶಿ

ನಿರ್ಜಲ ಏಕಾದಶಿ ಈ ಮಾಸದಲ್ಲಿ ಬರುವ ಅತ್ಯಂತ ವಿಶೇಷ. ವಿಶಿಷ್ಟವಾದ ದಿನ. ವರ್ಷದ 24 ಏಕಾದಶಿಗಳನ್ನು ಆಚರಣೆ ಮಾಡಿದಷ್ಟು ಪುಣ್ಯ ಈ ಒಂದು ನಿರ್ಜಲ ಏಕಾದಶಿ ಮಾಡಿದರೆ ಸಿಗುತ್ತೆ ಅನ್ನೋ ನಂಬಿಕೆ ಇದೆ. ಈ ಏಕಾದಶಿ ಆಚರಣೆ ಮಾಡುವವರು ಒಂದು ತೊಟ್ಟು ನೀರನ್ನೂ ಸಹ ಕುಡಿಯದೆ ಏಕಾದಶಿ ಆಚರಿಸಬೇಕು. ದಶಮಿಯ ರಾತ್ರಿ ಅಂದ್ರೆ ಏಕಾದಶಿಯ ಹಿಂದಿನ ದಿನ ರಾತ್ರಿ ಉಪವಾಸವಿರಬೇಕು. ನಂತರ ಏಕಾದಶಿಯ ದಿನವೂ ಉಪವಾಸ ಇರಬೇಕು. ಕೃಷ್ಣ ಮಹಾಭಾರತದಲ್ಲಿ ಧರ್ಮರಾಯನಿಗೆ ನಿರ್ಜಲ ಏಕಾದಶಿ ಮಹತ್ವದ ಬಗ್ಗೆ ಹೇಳಿದ್ದಾನೆ. ಫಲಾಪೇಕ್ಷೆ ಇಲ್ಲದೆ ಈ ಏಕಾದಶಿಯನ್ನು ಆಚರಿಸಬೇಕು. ಮೋಕ್ಷ ಬಯಸುವವರು ಬೀಜ ಇಲ್ಲದ ಹಣ್ಣುಗಳನ್ನು ದಾನ ಮಾಡಬೇಕು.

ಜ್ಯೇಷ್ಠ ಶುದ್ಧ ದ್ವಾದಶಿ-ಜ್ಯೇಷ್ಠ ಶುದ್ಧ ದ್ವಾದಶಿಯು ಆದಿಗುರು ಶಂಕರಾಚಾರ್ಯರು ಅಶರೀರವಾಗಿ ಗುಹೆ ಪ್ರವೇಶ ಮಾಡಿದ ದಿನ.

ಜ್ಯೇಷ್ಠ ಶುದ್ಧ ಚತುರ್ದಶಿ- ಈ ದಿನದಂದು ಆಂಜನೇಯನ ತಂದೆ ವಾಯು ಪೂಜೆಗೆ ಪ್ರಶಸ್ತವಾದ ದಿನ.

ಕಾರ ಹುಣ್ಣಿಮೆ ಅಥವಾ ಭೂಮಿ ಪೌರ್ಣಮಿ

ಭೂಮಿ ಪೂಜೆ ಮಾಡಿ ವ್ಯವಸಾಯ ಆರಂಭಿಸೋಕೆ ಶುಭ ದಿನವಿದು. ಈ ಹುಣ್ಣಿಮೆ ದಿನ ಭೂಮಿ ಪೂಜೆ ಮಾಡಿ ಮಣ್ಣನ್ನು ತೆಗೆದು ಸ್ನಾನದ ನೀರಿಗೆ ಬೆರೆಸಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತೆ ಅನ್ನೋ ನಂಬಿಕೆ ಇದೆ. ಯಾಕಂದ್ರೆ ಈ ದಿನ ಕಾಶ್ಯಪ ಮಹಾಮುನಿಗಳಿಂದ ಮಣ್ಣು ಅಭಿಮಂತ್ರಣ ಮಾಡಲ್ಪಟ್ಟಿರುತ್ತೆ ಅಂತಾ ಹೇಳಲಾಗುತ್ತೆ.

ಬಹುಳ ಪಂಚಮಿ-ಮಹಾಲಕ್ಷ್ಮಿ ಸಮೇತ ವಿಷ್ಣು ಪೂಜೆ ಮಾಡೋಕೆ ಈ ದಿನ ಪ್ರಶಶ್ತವಾದ ದಿನವಾಗಿದೆ.

ಬಹುಳ ಸಪ್ತಮಿ-ಸೂರ್ಯನ ಪತ್ನಿಯರಾದ ಛಾಯಾ, ಸಂಜ್ಞಾರ ಪೂಜೆಗೆ ಪ್ರಶಶ್ತವಾದ ದಿನವಿದು

ಬುಧ ಜಯಂತಿ- ಬುದ್ಧಿಗೆ ಅಧಿಪತಿ ಬುಧ. ವಿದ್ಯಾಭಿವೃದ್ಧಿಗೆ ಬುಧ ಗ್ರಹದ ಪೂಜೆ ಪ್ರಶಸ್ತವಾದುದು.ಬುಧ ಗ್ರಹದ ಜಯಂತಿ ಆಚರಿಸೋದ್ರಿಂದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ ಆಗುತ್ತೆ.

ಮಣ್ಣೆತ್ತಿನ ಅಮಾವಾಸ್ಯೆ

ಹೊಸದಾಗಿ ಬಿತ್ತನೆ, ವ್ಯವಸಾಯ ಪ್ರಾರಂಭಕ್ಕೆ ಮಣ್ಣೆತ್ತಿನ ಅಮಾವಾಸ್ಯೆ ಪ್ರಶಸ್ತವಾದ ದಿನ.

ಹಿರಿಯ ಮಕ್ಕಳಿಗೆ ವಿವಾಹ ಮಾಡಬಾರದು- ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜ್ಯೇಷ್ಠ ಮಾಸದಲ್ಲಿ ಮನೆಯ ಹಿರಿಯ ಮಕ್ಕಳಿಗೆ ವಿವಾಹ ಮಾಡಿದ್ರೆ ದೋಷ ಉಂಟಾಗುತ್ತೆ.

ಜೇಷ್ಠ ಮಾಸದ ಮಂಗಳವಾರಗಳು ಅತ್ಯಂತ ವಿಶೇಷ

ಹನುಮನ ಭಕ್ತರಿಗೆ ಮಂಗಳವಾರಗಳು ಅತ್ಯಂತ ವಿಶೇಷವಾದದ್ದು. 

ಅದರಲ್ಲೂ ಜೇಷ್ಠ ಮಾಸದಲ್ಲಿ ಬರುವ ಮಂಗಳವಾರಗಳು ಮತ್ತಷ್ಟು ವಿಶೇಷ. ಈ ದಿನ ಹನುಮಂತ ಭಕ್ತರ ಎಲ್ಲಾ ಆಶಯಗಳನ್ನು ಈಡೇರುಸುತ್ತಾನೆಂಬ ನಂಬಿಕೆ ಭಕ್ತರಲ್ಲಿದೆ. 

ಅದಕ್ಕೆ ಕಾರಣವೂ ಇದೆ. ರಾಮಭಕ್ತ ಹನುಮಂತ ಜೇಷ್ಠ ಮಾಸದ ಮಂಗಳವಾರ ಮೊದಲ ಬಾರಿ ಶ್ರೀರಾಮನನ್ನು ಭೇಟಿಯಾಗಿದ್ದನಂತೆ. ಹೀಗಾಗೇ ಜೇಷ್ಠ ಮಾಸದ ಮಂಗಳವಾರವನ್ನು ವಿಶೇಷ ಮಂಗಳವಾರವೆಂದು ಪರಿಗಣಿಸಲಾಗಿದೆ‌.

 ಜೇಷ್ಠ ಮಾಸದ ಎಲ್ಲಾ ಮಂಗಳವಾರವನ್ನು ಭಕ್ತರು ಹನುಮಂತನಿಗೆ ಮೀಸಲಿಡಲಾಗುತ್ತೆ.ಈ‌ ದಿನದಂದು ಹನುಮನ ದೇಗುಲಗಳಲ್ಲಿ ಪೂಜೆ-ಪುನಸ್ಕಾರಗಳು ಬಹಳ ವಿಜೃಂಭಣೆಯಿಂದ ನಡೆಯುತ್ತವೆ. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜೇಷ್ಠ ಮಾಸದ ಒಂಭತ್ತು ಮಂಗಳವಾರವನ್ನು ವಿಶೇಷ ಎಂದು ಪರಿಗಣಿಸಲಾಗಿದೆ‌. 

ಮೊದಲ ಮಂಗಳವಾರದ ದಿನ ಬೆಲ್ಲ ,ಗೋಧಿ ಸಿಹಿ ತಿಂಡಿಯನ್ನು ಪ್ರಸಾದವಾಗಿ ನೀಡಬೇಕು. 

ಈ ದಿನ ಮಾಡಿದ ದಾನಕ್ಕೆ ವಿಶೇಷ ಫಲ ದೊರೆಯುತ್ತೆ ಅನ್ನೋ ನಂಬಿಕೆ ಇದೆ. 

ಹನುಮ ಶ್ರೀ ರಾಮನನ್ನು ಭೇಟಿಯಾದ ದಿನವಾದ ಇಂದು ಹನುಮಂತ ಬೇಡಿದ ವರವನ್ನು ಭಕ್ತರಿಗೆ ನೀಡುತ್ತಾನೆಂಬ ಪ್ರತೀತಿ ಇದೆ.

 ಹಾಗಾಗಿ ಇಂದು ಭಕ್ತರು ಏನೇ ಸಂಕಲ್ಪ ಮಾಡಿದರೂ ಅದು ಖಚಿತವಾಗಿ ಫಲಿಸುತ್ತದೆ ಅನ್ನೋ ನಂಬಿಕೆ ಇದೆ. ಈ ದಿನ ಹನುಮನ ದೇಗುಲಕ್ಕೆ ಹೋಗಿ ತುಳಸಿಯನ್ನು ಅರ್ಪಿಸಿದರೆ ಒಳಿತಾಗಲಿದೆ.

ಹನುಮನ ಕೇಸರಿ ಪ್ರತಿ ದಿನ ಹಣೆಗೆ ಹಚ್ಚಿಕೊಳ್ಳಬೇಕು.

Leave a Comment

Your email address will not be published. Required fields are marked *