ಪಿತೃ ಪಕ್ಷದ ಮಹತ್ವ, ಪೂಜಾ ವಿಧಾನ
Index of Important Points
ಹಿಂದೂ ಧರ್ಮದಲ್ಲಿ ಹಿರಿಯರು ಹಾಗೂ ಪೂಜ್ಯರಿಗೆ ಶ್ರದ್ಧಾಂಜಲಿ ಸಲ್ಲಿಸುವ, ನಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ವಿಶೇಷ ಸಮಯ ಪಿತೃ ಪಕ್ಷ.
ಹದಿನಾರು ದಿನಗಳ ಈ ಪಿತೃ ಪಕ್ಷದ ಅವಧಿಯಲ್ಲಿ ಮೃತರ ಆತ್ಮಕ್ಕೆ ನೆಮ್ಮದಿ ಸಿಗಲಿ, ಅವರ ಪುನರ್ಜನ್ಮ ಮತ್ತು ಶಾಶ್ವತವಾಗಿ ಈ ವಿಶ್ವದಿಂದ ಮುಕ್ತ ಹರಿವಿಗೆ ತರ್ಪಣವನ್ನು ನೀಡುವುದು ಪದ್ಧತಿ.
ಪಿತೃ ಪಕ್ಷ ಎಂದರೇನು, ಏಕೆ ಪಿತೃ ಪಕ್ಷ ಪೂಜೆ ಮಾಡಬೇಕು ಎಂಬುದರ ಸವಿವರ ಮಾಹಿತಿ…
ಏನಿದು ಪಿತೃಪಕ್ಷ?
*ಅಕಾಲಿಕವಾಗಿ ಮೃತಪಟ್ಟವರ ಸಾವು ನಮಗೆ ನೋವು ಮತ್ತು ಸಂಕಟಗಳನ್ನು ನೀಡುತ್ತದೆ ಹಾಗೂ ಅವರ ದೇಹವು ಸಾಯುತ್ತದೆ ಆದರೆ ಆತ್ಮಗಳು ಸಾಯುವುದಿಲ್ಲ ಎಂದು ಹೇಳಲಾಗುತ್ತದೆ.
ಈ ಬ್ರಹ್ಮಾಂಡದ ಕೊನೆಯವರೆಗೂ ಆತ್ಮಗಳು ಇರುತ್ತವೆ ಮತ್ತು ಯಾರಾದರೂ ಅಕಾಲಿಕ ಮರಣದಿಂದ ಸತ್ತರೆ ಹೊಸ ಜನ್ಮದ ರೂಪದಲ್ಲಿ ಇನ್ನೊಂದು ಜನ್ಮವನ್ನು ತೆಗೆದುಕೊಳ್ಳಲು ಮುಕ್ತರಾಗಬೇಕು ಎಂಬ ನಂಬಿಕೆ ಇದೆ.
ಅತೃಪ್ತ ಆತ್ಮವು ತನ್ನ ಕುಟುಂಬ ಸದಸ್ಯರಿಗಿಂತ ಹೆಚ್ಚು ನೋವಿನಿಂದ ಕೂಡಿದೆ ಆದ್ದರಿಂದ ಈ ಅಮರ ಪ್ರಪಂಚದಿಂದ ಅದನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿ ಅವರ ಕುಟುಂಬ ಸದಸ್ಯರ ಮೇಲಿದೆ.
ಹಿಂದೂ ಧರ್ಮದಲ್ಲಿ, ನಮ್ಮ ಆಪ್ತರು ನಮ್ಮನ್ನು ತೊರೆದಾಗ ಅವರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು 13 ದಿನಗಳಲ್ಲಿ ಪೂಜೆ ಸಲ್ಲಿಸುವ ಪದ್ಧತಿ ಇದೆ.
ಆದರೆ ಒಬ್ಬ ವ್ಯಕ್ತಿಯು ಅಕಾಲಿಕ ಮರಣವನ್ನು ಅನುಭವಿಸಿದಾಗ, 13 ದಿನಗಳ ಪ್ರಕ್ರಿಯೆಗೆ ಸಲಹೆ ನೀಡಲಾಗುವುದಿಲ್ಲ.
ಜನರು ಚಂದ್ರಗ್ರಹಣದಲ್ಲಿ ಅಂದರೆ ಭಾದ್ರಪದ ತಿಂಗಳಲ್ಲಿ ಅಂದರೆ ಕೃಷ್ಣ ಪಕ್ಷ ತಿಂಗಳ ದ್ವಿತೀಯಾರ್ಧದಲ್ಲಿ ಪಿತೃ ಪಕ್ಷ ಪೂಜೆಯನ್ನು ಮಾಡುತ್ತಾರೆ.
15 ಚಂದ್ರ ದಿನಗಳನ್ನು ಪ್ರಥಮ, ದ್ವಿತೀಯ, ತೃತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ, ಅಮಾವಾಸ್ಯೆ ಎಂದು ಕರೆಯಲಾಗುತ್ತದೆ.
ಪಿತೃ ಪಕ್ಷ ಪೂಜೆಯ ಮಹತ್ವ
ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಸಾವಿನ ಮೊದಲ ವರ್ಷದಲ್ಲಿ ಶ್ರಾದ್ಧ ಆಚರಣೆಗಳನ್ನು ಮಾಡಲು ಸೂಚಿಸಲಾಗಿದೆ.
ಏಕೆಂದರೆ ಸಾವಿನ ನಂತರ ಒಂದು ವರ್ಷದ ನಂತರ ಅವರು ತಿನ್ನಲು ಆಹಾರ ಪಡೆಯುತ್ತಾರೆ.
ಮೊದಲ ವರ್ಷದಲ್ಲಿ ಈ ಪಿತೃಪಕ್ಷದಲ್ಲಿ ನಾವು 13 ದಿನಗಳ ಕಾಲ ಆಹಾರ ನೀಡಬೇಕು ಎಂದು ನಂಬಲಾಗಿದೆ.
ಒಬ್ಬ ವ್ಯಕ್ತಿಯು 13 ದಿನಗಳ ನಿರ್ಗಮನ ಮಾಡಿದಾಗ ಅದರ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರವನ್ನು ಮಾಡುತ್ತಾರೆ ಮತ್ತು ಅವರಿಗೆ ಆಹಾರವನ್ನು ನೀಡಲಾಗುತ್ತದೆ.
13 ದಿನಗಳ ನಂತರ ಆತ್ಮವು ತನ್ನ ಪ್ರಯಾಣವನ್ನು ಆರಂಭಿಸುತ್ತದೆ ಮತ್ತು ಹನ್ನೊಂದು ತಿಂಗಳಲ್ಲಿ ಯಮಲೋಕವನ್ನು ತಲುಪುತ್ತದೆ ಮತ್ತು ಕೊನೆಯ ಒಂದು ತಿಂಗಳಲ್ಲಿ ಅವರು ಯಮನ ಆಸ್ಥಾನವನ್ನು ತಲುಪುತ್ತಾರೆ. ಆಗ ಮಾತ್ರ ಅವನಿಗೆ ತಿನ್ನಲು ಆಹಾರ ಸಿಗುತ್ತದೆ. ಈ ಕಾರಣದಿಂದ ಶ್ರಾದ್ಧ ಮಾಡುವುದು ಬಹಳ ಮುಖ್ಯ ಎನ್ನಲಾಗುತ್ತದೆ.
ಮಹಾಲಯ ಅಮಾವಾಸ್ಯೆ ಎಂದು ಕರೆಯಲ್ಪಡುವ ಅಮಾವಾಸ್ಯೆಯು ಅಗಲಿದ ಆತ್ಮಗಳಿಗೆ ಸಮರ್ಪಿತವಾಗಿದೆ.
ನೀವು ಈ ದೇಹವನ್ನು ತೊರೆದಾಗ ಪುರೂರವ, ವಿಶ್ವದೇವ ಎಂಬ ದೇವತೆಗಳಿಂದ ಇನ್ನೊಂದು ಜಗತ್ತಿಗೆ ಮಾರ್ಗದರ್ಶನ ಪಡೆಯುತ್ತೀರಿ. ಅವರು ಬಂದು ನಿಮ್ಮನ್ನು ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಮಾರ್ಗದರ್ಶನ ಮಾಡುತ್ತಾರೆ.
ಮಹಾಲಯ ಅಮಾವಾಸ್ಯೆಯು ನೀವು ಅಗಲಿದ ಎಲ್ಲಾ ಆತ್ಮಗಳನ್ನು ನೆನಪಿಸಿಕೊಂಡು ಅವರಿಗೆ ಧನ್ಯವಾದಗಳನ್ನು ಅರ್ಪಿಸುವ ಮತ್ತು ಅವರಿಗೆ ಶಾಂತಿಯನ್ನು ಬಯಸುವ ದಿನವಾಗಿದೆ.
ಪುರಾತನ ಸಂಪ್ರದಾಯದ ಪ್ರಕಾರ ಕುಟುಂಬದ ಸದಸ್ಯರು ಎಳ್ಳು ಮತ್ತು ಅಕ್ಕಿಯನ್ನು ತೆಗೆದುಕೊಂಡು ತಮ್ಮ ಪೂರ್ವಜರನ್ನು ಪ್ರಾರ್ಥಿಸುತ್ತಾ ‘ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಿರಬಹುದು, ನೀವು ತೃಪ್ತರಾಗಬಹುದು’. ಇದನ್ನು ಮೂರು ಬಾರಿ ಹೇಳಿ ಮತ್ತು ನಂತರ ಅವರು ಸ್ವಲ್ಪ ಎಳ್ಳಿನ ಕಾಳುಗಳನ್ನು ನೀರಿನಲ್ಲಿ ಬಿಡುತ್ತಾರೆ.
ಈ ಆಚರಣೆಯ ಮಹತ್ವವೆಂದರೆ ಅಗಲಿದವರಿಗೆ ಹೇಳುವುದು – ನಿಮ್ಮ ಮನಸ್ಸಿನಲ್ಲಿ ಇನ್ನೂ ಕೆಲವು ಆಸೆಗಳಿದ್ದರೆ, ಅವು ಎಳ್ಳಿನಂತೆ ಎಂದು ತಿಳಿಯಿರಿ. ಅವು ಗಮನಾರ್ಹವಲ್ಲ, ಅವುಗಳನ್ನು ಬಿಡಿ. ನಾವು ನಿಮಗಾಗಿ ಅವುಗಳನ್ನು ನೋಡಿಕೊಳ್ಳುತ್ತೇವೆ. ನೀವು ಮುಕ್ತ, ಸಂತೋಷ ಮತ್ತು ತೃಪ್ತರಾಗಿರುತ್ತೀರಿ ಎಂದು ಹೇಳುವ ಪದ್ಧತಿ ಇದೆ.
ತರ್ಪಣ ಎಂದರೆ ಅಗಲಿದವರಿಗೆ ತೃಪ್ತಿಯನ್ನು ತರುವುದು. ಅವರಿಗೆ ತೃಪ್ತಿ ಮತ್ತು ಮುಂದೆ ಸಾಗುವಂತೆ ಹೇಳಲು ಇದನ್ನು ಮಾಡಲಾಗುತ್ತದೆ. ನೀರು ಪ್ರೀತಿಯ ಸಂಕೇತ. ಯಾರಿಗಾದರೂ ನೀರು ಕೊಡುವುದು ಎಂದರೆ ಪ್ರೀತಿಯನ್ನು ನೀಡುವುದು.
ನಾವು ಯಾಕಾಗಿ ಪಿತೃಪಕ್ಷವನ್ನು ಆಚರಿಸಬೇಕು..
ಯಾಕೆ ಪಿಂಡಪ್ರಧಾನ ಮಾಡುತ್ತೇವೆ ಮತ್ತು ಬ್ರಾಹ್ಮಣ ಭೋಜನ ದಕ್ಷಿಣೆ ದಾನ ಕೊಡಬೇಕು?
ತಿಳಿಯೋಣ..
ಪ್ರತಿಯೊಬ್ಬ ಮಗನ ಕರ್ತವ್ಯ ಪಕ್ಷಮಾಸದಲ್ಲಿ ಮೃತಪಿತೃಗಳನ್ನುದ್ದೇಶಿಸಿ ಪಕ್ಷವನ್ನು ಮಾಡುವುದು , ಅವರು ನಿಮಗೆ ಅಧಿಕಾರ ,ಅಂತಸ್ತು , ಐಶ್ವರ್ಯ , ಹಣ ಆಸ್ತಿ ಕೊಟ್ಟಿಲ್ಲ ಎಂದು ಯೋಚಿಸಬೇಡಿ.
ಜನ್ಮ ಕೊಟ್ಟ ಋಣವನ್ನಾದರೂ ನೀವು ತೀರಿಸಲೇಬೇಕು..
ನೀವು ಕೊಟ್ಟ ಅನ್ನ ದಿಂದ ನಿಮ್ಮ ಮುಂದಿನ ಪೀಳಿಗೆ ಅಭಿವೃದ್ಧಿ ಹೊಂದುತ್ತದೆ. ಶೃದ್ಧೆಯಿಂದ ಮಾಡಿ . ಅದಕ್ಕೇ ಹೇಳುವದು ಶ್ರದ್ಧೆಯಿಂದ ಮಾಡಿದರೆ ಅದು ಶ್ರಾದ್ಧ.
ಭಕ್ತಿಯಿಂದ ಮಾಡಿದರೆ ಪೂಜಾ ಫಲ ದೊರೆಯದೇ ಇರದು… ಖಂಡಿತಾ ಫಲವಿಹುದು ವಿಶ್ವಾಸೋ ಫಲದಾಯಕಃ।…
- ಅಗ್ನೌ ಕರಣೇನ ದೇವಸ್ಥಾಃ…..ಅಂದರೆ ತನ್ನ ಪಿತೃಗಳು ದೇವತೆಗಳಾಗಿ ದೇವಲೋಕದಲ್ಲಿದ್ದರೆ, ಅವರಿಗೆ ಅಗ್ನೌ ಕರಣಾಕ್ಯ ಅನ್ನದಿಂದ ತೃಪ್ತಿಯಾಗುತ್ತದೆ..(ಅಗ್ನಿಯಲ್ಲಿ ಹಾಕುವ ಆಹುತಿಗಳಿಂದ.)
- ಸ್ವರ್ಗಸ್ಥಾಃ ವಿಪ್ರಭೋಜನೇ. ತನ್ನ ಪಿತೃಗಳು ಸ್ವರ್ಗದಲ್ಲಿದ್ದರೆ ಬ್ರಾಹ್ಮಣರ ಭೋಜನ ರೂಪ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ..
- ಯಮಸ್ಥಾ ಪಿಂಡದಾನೇನ.. …. ತನ್ನ ಪಿತೃಗಳು ಯಮಲೋಕದಲ್ಲಿದ್ದರೆ ,ಪಿಂಡ ಪ್ರಧಾನರೂಪವಾದ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ.
- ನರಕೇ ವಿಕಿರೇಣ ತು….. ತನ್ನ ಪಿತೃಗಳು ನರಕಲೋಕದಲ್ಲಿದ್ದರೆ , ವಿಕಿರಾಕ್ಯ ಅನ್ನದಿಂದ ಅವರಿಗೆ ತೃಪ್ತಿಯಾಗುತ್ತದೆ.
- ಉಚ್ಛಿಷ್ಟೇನ ಪಿಶಾಚಾಶ್ಚ….ತನ್ನ ಪಿತೃಗಳು ಪಿಶಾಚಿಗಳಾಗಿದ್ದರೆ… ಉಚ್ಛಿಷ್ಟ ಅನ್ನದಿಂದ ಅವರಿಗೆ ತೃಪ್ತಿ ಯಾಗುತ್ತದೆ.
- ಅಸುರಾ ಭೂರಿ ಭೋಜನಾತ್…..ತನ್ನ ಪಿತೃಗಳು ಅಸುರರಾಗಿದ್ದರೆ ,ಭೂರಿ ಭೋಜನದಿಂದ ಅವರಿಗೆ ತೃಪ್ತಿ ಯಾಗುತ್ತದೆ…
- ದಕ್ಷಿಣೇನ ಮನುಷ್ಯಾದ್ಯಾಃ ….. ತನ್ನ ಪಿತೃಗಳು ಮನುಷ್ಯರಾಗಿ ಜನಿಸಿದ್ದ ಕಾಲಕ್ಕೂ ಅಥವಾ ಯಾವುದೇ ಯೋನಿಯಲ್ಲಿ ಜನಿಸಿದ್ದರೂ ದಕ್ಷಿಣಾಕ್ಯ ಅನ್ನ ದಿಂದ ಅವರಿಗೆ ತೃಪ್ತಿ ಯಾಗುತ್ತದೆ….
ಅದಕ್ಕಾಗಿ ಪಿತೃಗಳ ಸಂತೋಷಕ್ಕಾಗಿ ಪಿತೃ ಪಕ್ಷದಲ್ಲಿ ಪಿಂಡಪ್ರಧಾನ ಮಾಡಿ ಬ್ರಾಹ್ಮಣ ರಿಗೆ ಭೋಜನ ದಕ್ಷಿಣೆ ದಾನ ಅನ್ನದಾನ ಇತರ ಶಕ್ತ್ಯನುಸಾರ ದಾನ ಕೊಡಬೇಕು ….
ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ ೧೫ ದಿನಗಳ ಈ ಕಾಲವನ್ನು “ಪಿತೃ ಪಕ್ಷ” “ಪಕ್ಷಮಾಸ” ಎನ್ನುತ್ತಾರೆ.
ಯಾವ ಶ್ರಾದ್ಧಾಧಿಕಾರಿಗಳು ಈ ಅವಧಿಯಲ್ಲಿ ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು ಮೊದಲಾದವುಗಳನ್ನಿತ್ತು ಆಶೀರ್ವಾದ ಮಾಡುತ್ತಾರೆ.
ಪಕ್ಷಶ್ರಾದ್ಧವನ್ನು ಮಾಡದವರಿಗೆ ಶಾಪವನ್ನು ನೀಡುತ್ತಾರೆ. ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ. ಹುಟ್ಟಿದರೂ ಅಂಗ ವಿಕಲರಾಗಿಯೋ ನಮಗೆ ಹೊರೆಯಾಗಿಯೋ ಹುಟ್ಟಬಹುದು.
ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾದಾಗಿ, ಸ್ವರ್ಗ ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು.
ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ. ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ. ಆಗ ಇಂದ್ರ ಹೇಳುತ್ತಾನೆ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ.
ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೆ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ”. ತನಗೆ ತನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ.
ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ ೧೫ ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ. ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.
ಮಹಾಲಯ ಅಂದರೆ – “ಮಹಾ” – ದೊಡ್ಡ “ಲಯ” – ನಾಶ – ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು.
ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವವನ್ನು ಆಚರಿಸುತ್ತೇವೆ. ಅದುವೇ ಸರ್ವಪಿತೃ ಅಮಾವಾಸ್ಯೆ.ಮತ್ತು ಮಹಾಲಯ ಶ್ರಾದ್ಧ.
ಪಿತೃಗಳಿಗೆ ತಿಲ ತರ್ಪಣವೇಕೆ ?
ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ). ಅವು ಅವನ ವೃದ್ಧಿಗೂ ಕಾರಣವಾಗಿವೆ. ಅವನೇ ಪಿತೃಗಳಿಗೆ ಆಧಾರ. ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ. ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ. ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ. ಜೊತೆಗೆ ಯಜ್ಞ ವರಾಹ ಸ್ವಾಮಿಯ ಬೆವರಿಂದ ಹುಟ್ಟಿದ್ದು ಎಳ್ಳು. ರೋಮದಿಂದ ಹುಟ್ಟಿದ್ದು ದಬೆ೯. ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾರಣವಾಗಿವೆ.
ಭೂಮಿಯಲ್ಲಿ ೨೪ ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ ೧೫ ದಿನ ಹಗಲು ೧೫ ದಿನ ರಾತ್ರಿಯಾದರೆ ೧ ದಿನವಾಗುವುದು.
ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು.
ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.
ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ ?
ದರ್ಬೆ, ಕುಶ, ಕಾಶ, ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು.
ಒಮ್ಮೆ ಗರುಡನು ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದೃವಿನಿಂದ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ಸ್ನಾನ ಮಾಡಿ ಶುದ್ಧವಾಗಿ ಬರಲು ಹೇಳುತ್ತಾನೆ. ಮತ್ತು ಆ ಸರ್ಪಗಳು ಪುನಃ: ಬರುವವರೆಗೂ ಅಮೃತವನ್ನು ದರ್ಬೆ ಗುಂಪಿನ ಮೇಲೆ ಇಟ್ಟಿರುತ್ತಾನೆ. ಅಷ್ಟರಲ್ಲಿ ದೇವೇಂದ್ರನು ಬಂದು ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಬೆಯ ಗುಂಪಿನ ಮೇಲೆ ಬೀಳುತ್ತದೆ. ಆದ್ದರಿಂದ ದರ್ಬೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.
ಶ್ರಾದ್ಧದಲ್ಲಿ ಒಟ್ಟು 5 ಪವಿತ್ರಗಳ ಧಾರಣೆ ಇದೆ.(ಕೆಲವೆಡೆ ಮೂರು.)
- ಆರಂಭದಲ್ಲಿ 1 ಪವಿತ್ರ ಧಾರಣೆ, ಪಾದಪ್ರಕ್ಷಾಲನ ನಂತರ ವಿಸರ್ಜನೆ.
- ಪಾದ ಪ್ರಕ್ಷಾಲನ ಬಳಿಕ ಮತ್ತೊಂದು ಪವಿತ್ರ ಧಾರಣೆ. ಪಿಂಡ ಆಘ್ರಾಣದ ತರುವಾಯ ವಿಸರ್ಜನೆ.
- ಆಘ್ರಾಣವಾದ ಮೇಲೆ ಇನ್ನೊಂದು ಪವಿತ್ರ ಧಾರಣೆ ಉಚ್ಚಷ್ಟ ಪಿಂಡ ಪ್ರದಾನ ನಂತರ ವಿಸರ್ಜನೆ(ಕಾಕ ಬಲಿ)
- ಉಚ್ಚಷ್ಟ ಪಿಂಡ ಪ್ರದಾನ ನಂತರ ಮತ್ತೊಂದು ಪವಿತ್ರ ಧಾರಣೆ ಇದು ಶ್ರಾದ್ಧಾಂತ್ಯದಲ್ಲಿ ವಿಸರ್ಜನೆ.
- ಕೃಷ್ಣಾರ್ಪಣ ನಂತರ ಇನ್ನೊಂದು ಪವಿತ್ರ ಧಾರಣೆ ಅದು ಪರಿಹನಿ ತರ್ಪಣ ನಂತರ ವಿಸರ್ಜಿಸಬೇಕು. ಅಥವಾ ಬ್ರಾಹ್ಮಣ ಭೋಜನಕ್ಕೆ ಕುಳಿತ ನಂತರ.
ಪಿತಾ ದದಾತಿ ಸತ್ಪುತ್ರಾನ್ ಗೋಧನಾನಿ ಪಿತಾಮಹ: |
ಧನದಾತಾ ಭವೇತ್ಸೋಪಿ ಯಸ್ತಸ್ಯ ಪ್ರಪಿತಾಮಹ: |
पिता ददाति सत्पुत्रान् गोधनानि पितामह: ।
धनदाता भवेत्सोपि यस्तस्य प्रपितामह: ।।
ದದ್ಯಾದ್ವಿಫುಲಮನ್ನಾದ್ಯಂ ವೃದ್ಧಸ್ತು ಪ್ರಪಿತಾಮಹ: |
ತೃಪ್ತಾ: ಶ್ರಾದ್ಧೇನ ತೇ ಸರ್ವೇ ದತ್ವಾ ಪುತ್ರಸ್ಯ ವಾಂಛಿತಂ ||
दद्याद्विपुलमन्नाद्यं वृद्धस्तु प्रपितामह: ।
तृप्ता: श्राद्धेन ते सर्वे दत्वा पुत्रस्य वांछितम्।।
ಮಹಾಲಯ ಅಮಾವಾಸ್ಯೆಯ ಮಹತ್ವ
ಮಹಾಲಯ ಅಮಾವಾಸ್ಯೆಯು ಪಿತೃ ಪಕ್ಷದ ಅಂತ್ಯ ಎನ್ನಲಾಗುತ್ತದೆ. ಇದು ಸರ್ವಪತ್ರಿ ಅಮಾವಾಸ್ಯೆ ಅಥವಾ ಸರ್ವಪಿತೃ ಮೋಕ್ಷ ಅಮಾವಾಸ್ಯೆ ಎಂದೂ ಕರೆಯಲ್ಪಡುವ ಪ್ರಮುಖ ದಿನವಾಗಿದೆ.
ಈ ದಿನದಂದು ದುರ್ಗಾ ದೇವಿಯು ಭೂಮಿಗೆ ಇಳಿಯುತ್ತಾಳೆ ಎಂದು ನಂಬಲಾಗಿದೆ.
ಪೂರ್ವಜರ ಸಾವಿನ ಸಮಯ, ದಿನಾಂಕ ಮತ್ತು ಸ್ವಭಾವವನ್ನು ಲೆಕ್ಕಿಸದೆ ಶ್ರಾದ್ಧವನ್ನು ಮಾಡುವ ಮೂಲಕ ಒಬ್ಬನು ತನ್ನ ಪೂರ್ವಜರಿಗೆ ಕರ್ತವ್ಯವನ್ನು ಪೂರೈಸುವ ದಿನ ಇದು.
ಇದು ಒಂದು ರೀತಿಯ ಪರ್ವಾಣ ಶ್ರಾದ್ಧ. ಈ ದಿನ ಶ್ರಾದ್ಧ, ತರ್ಪಣವನ್ನು ಮಾಡಲಾಗುತ್ತದೆ.
ಈ ದಿನವು ಎಲ್ಲಾ ಪೂರ್ವಜರು ಅಥವಾ ಕುಟುಂಬದ ಸದಸ್ಯರಿಗೆ ಅಪರಾ ಕರ್ಮವನ್ನು ಮಾಡಲು ಸೂಕ್ತವಾಗಿದೆ. ಒಂದು ವೇಳೆ ಪಿತೃಪಕ್ಷದ ಇತರ ಎಲ್ಲಾ ದಿನಗಳಲ್ಲಿ ಆಚರಣೆಗಳನ್ನು ಮಾಡಲು ಸಾಧ್ಯವಾಗದಿದ್ದರೆ, ಮಹಾಲಯ ಅಮಾವಾಸ್ಯೆಯಂದು ಇದನ್ನು ಮಾಡಬಹುದು.
ಕೆಲವರು ಕುಟುಂಬ ಸದಸ್ಯರು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಅದನ್ನು ಸ್ವಚ್ಛಗೊಳಿಸುವುದು ಮತ್ತು ಪಿತೃ ಪಕ್ಷ ಪೂಜೆ ಮಾಡುವುದು ಮತ್ತು ಆ ದಿನ ಮೃತರನ್ನು ಸಮಾಧಾನಪಡಿಸಲು ವಿವಿಧ ಆಹಾರ ಪದಾರ್ಥಗಳನ್ನು ನೀಡುವುದು ಸಾಮಾನ್ಯವಾಗಿದೆ.
ಮಹಾಲಯ ಅಮಾವಾಸ್ಯೆ ಪಿತೃಪಕ್ಷ ಆಚರಣೆ
ಭಾದ್ರಪದ ಕೃಷ್ಣ ಪಿತೃಪಕ್ಷ
ಮಹ ಆಲಯಃ ಮಹಾಲಯಃ ಪಿತೃಗಳ ಆರಾಧನೆಯ ಆಲಯವೇ ಮಹಾಲಯ.
ಹೋಮಶ್ಚ ಪಿಂಡದಾನಂ ಚ ತಥಾ ಬ್ರಾಹ್ಮಣಭೋಜನಮ್|
ಶ್ರಾದ್ಧ ಶಬ್ದಾಭಿದೀಯಂ ಸ್ಯಾತ್ ಏಕಸ್ಮಿನ್ನೌಪಚಾರಿಕಮ್||
ಅಗ್ನೌಕರಣ, ಪಿಂಡದಾನ, ಬ್ರಾಹ್ಮಣಭೋಜನ
ಈ ಕ್ರೀಯಗಳು ಪ್ರಧಾನವಾಗಿರುವುದೇ ಶ್ರಾದ್ಧ ಎಂಬ ಶಬ್ದದಿಂದ ಕರೆಯುವ ಪಿತೃಗಳಿಗೆ ಒಂದು ಉಪಚಾರವಾಗಿದೆ.
“ಶ್ರದ್ಧಯಾ ದೀಯತೇ ಇತಿ ಶ್ರಾದ್ಧಃ”
ಶ್ರದ್ಧೆಯಿಂದ ತಿಲತರ್ಪಣ ಪಿಂಡವನ್ನು ಪಿತೃಗಳಿಗೆ ಕೊಡಲ್ಪಡುವುದೇ ಶ್ರಾದ್ಧ.
ಹಾಗಾದರೆ ಆ ಶ್ರಾದ್ಧಗಳನ್ನು ಯಾವ ಯಾವ ಪ್ರದೇಶದಲ್ಲಿ ಮಾಡಬಹುದು.
“ಸ್ವಗ್ರಹೇ ವನಾನಿ ಗಿರಯೋ ನದ್ಯಃ ಪಾತ್ರಾನಿ ಚ”
ತಮ್ಮ ಮನೆಯಲ್ಲೇ ಮಾಡವುದು ಉತ್ತಮವು.
ಅರಣ್ಯ, ಗಿರಿ,ತದಿಪಾತ್ರಗಳಲ್ಲಿ, ತೀರ್ಥಕ್ಷೇತ್ರಗಳಲ್ಲಿ ಮಾಡಬಹುದು.
ಪರರಮನೆಯಲ್ಲಿ ,ಕೊಟ್ಟಿಗೆಯಲ್ಲಿ, ಮಲೀನಸ್ಥಳದಲ್ಲಿ ಮಾಡಬಾರದು.ಮಾಡಿದರೂ ಅಲ್ಲಿರುವ ದುಷ್ಟಶಕ್ತಿಗಳು ಶ್ರಾದ್ಧಭಾಗವನ್ನು ಅಪಹರಿಸುವರು.
ಪಿತೃಪಕ್ಷದಲ್ಲಿ ದಿನವೂ ಶ್ರಾದ್ಧವನ್ನು ಮಾಡುವ ಪದ್ಧತಿಯೂ ಇದೆ…
ವಿವಿಧ ರೀತಿಯಿಂದ ಮರಣವಾದವರಿಗೆ ಈ ಪಕ್ಷದಲ್ಲಿ ಆ ವಿಧದಿಂದ ಮಾಡುವ ಶ್ರಾದ್ಧಗಳಿಗೆ ಅದರದೇ ಆದ ಒಂದು ದಿನವನ್ನು ಕಲ್ಪಿಸಲಾಗಿದೆ.
ಅವರವರ ಪರಂಪರೆಯಂತೆ ಆಯಾಯ ಮೃತತಿಥಿಗಳಲ್ಲಿ ಮಾಡುವ ವಿಧಾನವೂ ಇದೆ.
ಭರಣೀಶ್ರಾದ್ಧ, ಅಷ್ಟಕಶ್ರಾದ್ಧ, ಅನ್ವಷ್ಟಕ, ಅವಿಧವಾನವಮೀ, ಸಂನ್ಯಾಸಿಮಹಾಲಯ, ಮಘಾತ್ರಯೋದಶಿ ಶ್ರಾದ್ಧ, ಶಸ್ತ್ರಾದಿ ಹತ ಶ್ರಾದ್ಧ, ದರ್ಶ ಮಹಾಲಯಶ್ರಾದ್ಧ. ಇತ್ಯಾದಿ.
ಶಮೀಪತ್ರಪ್ರಮಾಣೇನ ಪಿಂಡಂ ದದ್ಯಾತ್ ಗಯಾಶಿರೇ|
ಉದ್ಧರೇತ್ ಸಪ್ತಗೋತ್ರಾಣಿ ಕುಲಮೇಕೋತ್ತರಂ ಶತಮ್||
ಶಮಿಪತ್ರೆಯ ಪ್ರಮಾಣದ ಪಿಂಡವನ್ನು ಗಯಾದಲ್ಲಿ ಕೊಟ್ಟರೆ 7 ತಲೆಮಾರಿನ 101 ಪಿತೃಗಳಕುಲವು ಉದ್ಧಾರವಾಗುವುದು.
ಅಂದರೆ ತಂದೆ, ತಾಯಿ, ಹೆಂಡತಿ, ತಂಗಿ, ಕುಟುಂಬ, ತಂದೆಯ ತಾಯಿಯ ಸಂಬಂಧಿಗಳು.
ಇವರಕುಲ ಸೇರಿ 101 ಆಗುವವು.
ಗಯಾಶ್ರಾದ್ಧದ ಫಲಪ್ರಾಪ್ತಿಯಾಗುವುದು ಎಂದು ಭರಣಿಶ್ರಾದ್ಧ ಮಾಡುತ್ತಾರೆ..ಪಿತೃಪಕ್ಷದಲ್ಲಿ ಭರಣಿನಕ್ಷತ್ರಯುಕ್ತವಾದ ಶ್ರಾದ್ಧವೇ ಭರಣಿ ಶ್ರಾದ್ಧ.
ಪಿತೃಪಕ್ಷದ ಅಷ್ಟಮೀ ತಿಥಿಯಲ್ಲಿ ಮಾಡುವುದೇ ಅಷ್ಟಕಶ್ರಾದ್ಧ. ಅಷ್ಟಕಶ್ರಾದ್ಧವು ಆಶ್ವಲಾಯನರು ಮಾಡುವಂತದ್ದಾಗಿದೆ..
ಅಷ್ಟಮೀಯ ನಂತರ ನವಮಿದಿನ ಮಾಡುವ ಶ್ರಾದ್ಧವೇ ಅನ್ವಷ್ಠಕವೆನಿಸುವುದು.
ಅವಿಧವಾ ನವಮಿ ಶ್ರಾದ್ಧ. ಗಂಡನಸಮ್ಮುಖದಲ್ಲೇ ಮೃತಳಾದ ಸುವಾಸಿನಿಗೆ ಮಾಡುವ ಶ್ರಾದ್ಧವೇ ಅವಿಧವಾ ನವಮಿ.
ಸಂನ್ಯಾಸಿಗಳ ನೆನಪಿಗಾಗಿ ಮಾಡುವುದೇ ಸನ್ಯಾಸಿ ಮಹಾಲಯ.
ಮಘಾತ್ರಯೋದಶಿ ಶ್ರಾದ್ಧ. ಪಿತೃಪಕ್ಷದ ತ್ರಯೋದಶಿ ಆದಿನ ಹೆಚ್ಚಾಗಿ ಮಘಾನಕ್ಷತ್ರದಲ್ಲಿ ಚಂದ್ರನಿರುವ ದಿನದಂದು ಶ್ರಾದ್ಧ.
ಶಸ್ತ್ರಾಸ್ತ್ರಗಳಿಂದ ಮರಣಿಸಿದವರಿಗೆ ಚತುರ್ದಶಿದಿನ ಮಾಡುವ ಶಸ್ತ್ರಾದಿಹತ ಶ್ರಾದ್ದ.
ಅಮಾವಾಸ್ಯೆಯಂದು ಮಹಾಲಯಶ್ರಾದ್ಧ..
ಪಿತೃಪಕ್ಷದ ತ್ರಯೋದಶಿಯ ಹಸ್ತಾನಕ್ಷತ್ರದಲ್ಲಿ ಸೂರ್ಯನಿದ್ದು ,ಮಘಾನಕ್ಷತ್ರದಲ್ಲಿ ಚಂದ್ರನಿದ್ದು , ತ್ರಯೋದಶಿ ಸಿಗುವುದು ಗಜಚ್ಛಾಯಾ ಎಂಬ ವಿಶೇಷ ಯೋಗವಾಗಿದೆ..
ಈ ದಿನದ ಶ್ರಾದ್ಧ ವಿಶೇಷವಾಗಿದ್ದು ಪಿತೃಗಳಿಗೆ ನೇರವಾಗಿ ತಲುಪುತ್ತದೆ.
ಈ ದಿನದಂದು ಪ್ರೆತೋದ್ಧಾರದ ಮೋಕ್ಷನಾರಾಯಣಬಲಿ ಮಾಡಿದರೆ ಪ್ರೇತವು ಉದ್ದಾರವಾಗಿಯೇ ಆಗುತ್ತದೆ ಎನ್ನಬಹುದು.
ಏಕೆಂದರೆ ಗಮನಿಸಿ:
“ಮಘಾ ನಕ್ಷತ್ರಂ ಪಿತರೋ ದೇವತಾ” ಮಘಾನಕ್ಷತ್ರಕ್ಕೆ ಪಿತೃದೇವತೆಗಳು ಎಂದು ವೇದವು ಸಾರುತ್ತದೆ.
ಪಿತೃದೇವತೆ ಅಂದರೆ ವಸು, ರುದ್ರ, ಆದಿತ್ಯ ಸ್ವರೂಪಿ ಪಿತೃ ಪಿತಾಮಹ ಪ್ರಪೀತಾಮಹರು
ವಸುಗಳ ಲೋಕಪಾಲನಾಯಕ ಇಂದ್ರನ ರಥಕ್ಕೆ ಐರಾವತ ಎಂಬ ಗಜವಾಗಿದೆ.
ಅಂದು ಗಜಚ್ಛಾಯಾ ಯೋಗ. ಐರಾವತದ ಛಾಯೆ ಎನ್ನಬಹುದು.ತ್ರಯೋದಶಿಯು ಪ್ರದೋಷಪೂಜೆಯ ರುದ್ರನ ದಿನ, ಕನ್ಯಾರಾಶಿಯು ಮೇಷದಿಂದ 6 ಮನೆ 6ರಲ್ಲಿ ಆದಿತ್ಯನು ವಿಜಯಫಲವನ್ನು ನೀಡುವನು.
ಗಯಾ ಶ್ರಾದ್ಧದ ಮಹಿಮೆ
” ಗಯಾ ” ಎಂಬುವನು ಒಬ್ಬ ರಾಕ್ಷಸ. ಇವನು ಶ್ರೀ ಮಹಾವಿಷ್ಣುವಿನ ಭಕ್ತ. ವಿಶೇಷವಾಗಿ ಶ್ರೀ ಮಹಾವಿಷ್ಣುವನ್ನು ಕುರಿತು ತಪಸ್ಸು ಮಾಡಿ ಬೇರಾರಿಂದಲೂ ಜಯಿಸಲಶಕ್ಯವಾದ ಶಕ್ತಿಯನ್ನು ಪಡೆದಿದ್ದನು.
ರಾಕ್ಷಸತ್ವ ಗುಣದಿಂದ ಕೂಡಿದ್ದುದರಿಂದ ತಪಃಶಕ್ತಿಯನ್ನು ಪಡೆದಿದ್ದರೂ ರಜೋ ಗುಣ ಭೂಯಿಷ್ಠನಾಗಿ, ಅಹಂಕಾರದಿಂದ ಮೆರೆಯುವ ದೇವತೆಗಳನ್ನೂ ಬಿಡದೇ ಬಿಡದಂತೆ ಎಲ್ಲರಿಗೂ ನಾನಾ ರೀತಿಯಾದ ತೊಂದರೆಯನ್ನು ಉಂಟು ಮಾಡುತ್ತಿದ್ದನು. ಇವನ ಹಿಂಸೆಯನ್ನು ಸಹಿಸಲಾರದೇ ದೇವತೆಗಳು ಶ್ರೀ ಚತುರ್ಮುಖ ಬ್ರಹ್ಮದೇವರಲ್ಲಿ ಏನಾದರೂ ಮಾಡಿ ನಾಶಪಿಡಿಸಬೇಕೆಂದು ಮೊರೆಯಿಟ್ಟರು.
ಆಗ ಶ್ರೀ ಚತುರ್ಮುಖ ಬ್ರಹ್ಮದೇವರು ಶ್ರೀ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರನಾದ ಇವನನ್ನು ತಾನು ಏನೂ ಮಾಡಲಾರನೆಂದರಿತು ಶ್ರೀ ಮಹಾವಿಷ್ಣುವಿನಲ್ಲೇ ಮೊರೆ ಹೋಗಿ. ಇದಕ್ಕೆ ಒಂದು ಉಪಾಯವನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತೇನೆ.
ಆಗ ಶ್ರೀ ಮಹಾವಿಷ್ಣುವು ತನ್ನ ಭಕ್ತನಾದ ಗಯಾಸುರನ ವಿಷಯದಲ್ಲಿ ವಿಶೇಷವಾದ ಕೃಪೆಯಿಂದ ಕೂಡಿದವನಾಗಿ, ತನ್ನಲ್ಲಿ ಶರಣು ಹೋದ ಶ್ರೀ ಚತುರ್ಮುಖ ಬ್ರಹ್ಮಾದಿಗಳಿಗೂ ಅನುಗ್ರಹ ಮಾಡುವ ಸಲುವಾಗಿ ಶ್ರೀ ಮಹಾವಿಷ್ಣುವು ಒಬ್ಬ ಬ್ರಾಹ್ಮಣನ ವೇಷವನ್ನು ಧರಿಸಿ, ಗಯಾಸುರನ ಬಳಿ ಹೋಗಿ ತಾನು ಒಂದು ಮಹತ್ತರವಾದ ವೈಷ್ಣವ ಯಜ್ಞವನ್ನು ಮಾಡಬೇಕೆಂದು ಅದಕ್ಕೆ ಸ್ಥಳವಾವುದೂ ಸಿಗದಿರುವುದರಿಂದ, ಎಲೈ ಗಯನೇ ನೀನೆ ಅಂಥಹ ಸ್ಥಳವೊಂದನ್ನು ತೋರಿಸಿ ಕೊಡಬೇಕೆಂದು ಹೇಳಿದನು!
ಆಗ ಶ್ರೀ ಮಹಾವಿಷ್ಣು ಭಕ್ತನಾದ ಗಯನು ವೈಷ್ಣವ ಯಾಗಕ್ಕೆ ತನ್ನ ದೇಹವನ್ನೇ ಅರ್ಪಿಸುವುದಾಗಿ ತೀರ್ಮಾನಿಸಿ ತನ್ನ ಎದೆಯ ಮೇಲೆ ಯಜ್ಞ ಕುಂಡವನ್ನು ನಿರ್ಮಿಸಿ ಅಲ್ಲಿಯೇ ಶ್ರೀಮಹಾವಿಷ್ಣು ಪ್ರೀತಿಗಾಗಿ ಈ ವೈಷ್ಣವ ಯಜ್ಞವನ್ನು ಮಾಡಬಹುದೆಂದು ಹೇಳಿ ಮಲಗಿದನು.
ಆ ಕೂಡಲೇ ಶ್ರೀ ಚತುರ್ಮುಖ ಬ್ರಹ್ಮದೇವರು ಅವನ ಎದೆಯ ಮೇಲೆ ಹಾಸುಗಲ್ಲನ್ನೊಂದು ಇಟ್ಟು ಅದರ ಮೇಲೆ ಯಜ್ಞ ಕುಂಡವನ್ನು ನಿರ್ಮಿಸಿದರು. ಆಗ ಗಯನ ಉಸಿರಾಟದ ಕಾರಣ ಯಜ್ಞ ಕುಂಡವು ಅಲಗಾಡಿತು. ಅದನ್ನು ಕಂಡ ಶ್ರೀ ಬ್ರಹ್ಮದೇವರು, ಕುಂಡವನ್ನು ಸ್ಥಿರಗೊಳಿಸಬೇಕೆಂದು ಶ್ರೀ ಹರಿಯಲ್ಲಿ ಪ್ರಾರ್ಥಿಸಿದನು.
ಅದೇ ಸಮಯದಲ್ಲಿ ತನ್ನ ಮೇಲಿನ ಭಕ್ತಿಯಿಂದ ದುಷ್ಟವಾದ ರಾಕ್ಷಸ ಜನ್ಮದಲ್ಲಿ ಹುಟ್ಟಿದ್ದರೂ ತನ್ನ ಮರಣವನ್ನೇ ಲಕ್ಷ್ಯ ಮಾಡದೇ ಯಜ್ಞಾರ್ಥವಾಗಿ ತನ್ನ ದೇಹವನ್ನೇ ಅರ್ಪಿಸಿದ ತನ್ನ ಭಕ್ತನಿಗೆ ಶಾಶ್ವತವಾದ ವೈಕುಂಠ ಲೋಕವನ್ನೇ ಅನುಗ್ರಹಿಸಿ ಕೊಡಬೇಕೆಂದು ತೀರ್ಮಾನಿಸಿ ತನ್ನ ಬಲ ಪಾದವನ್ನು ಅವನ ಎದೆಯ ಮೇಲಿರುವ ಯಜ್ಞ ಕುಂಡದಲ್ಲಿಟ್ಟು ನಿಂತು ಕೊಂಡನು!
ತನ್ನ ನಿಜ ಸ್ವರೂಪವನ್ನು ತೋರಿಕೊಂಡನು. ಆ ಕೂಡಲೇ ಶ್ರೀ ಪರಮಾತ್ಮನ ಸಂಸರ್ಗದಿಂದ ಸತ್ವ ಗುಣ ಭೂಯಿಷ್ಠನಾದ ಗಯಾಸುರನು ಶ್ರೀ ಹರಿಯನ್ನು ಕಂಡು ಅವನಲ್ಲಿ ಬೇಡುತ್ತಾನೆ.
” ಸ್ವಾಮಿ! ನಾನು ಇಷ್ಟುದಿನ ಮಾಡಿದ ತಪಸ್ಸಿನ ಫಲವು ಇಂದು ಲಭಿಸಿತು. ನನಗೆ ಇಂದು ನೀವು ಮುಕ್ತೈಶ್ವರ್ಯವನ್ನು ಕರುಣಿಸಿ ಕೊಡಿ. ನಿಮ್ಮ ಪಾದದಿಂದ ಅಂಕಿತವಾಗಿರುವ ಸ್ಥಳವು ” ಗಯಾ ಕ್ಷೇತ್ರ ” ವೆಂದು ಪ್ರಸಿದ್ಧಿಗೆ ಬರಲಿ! ನಿಮ್ಮ ಪಾದದ ಅಂಕನವು ಎಂದೆಂದಿಗೂ ಅಳಿಯದಂತೆ ನಿಮ್ಮ ಸಂಪೂರ್ಣ ಸನ್ನಿಧಾನದಿಂದ ಇಲ್ಲಿರಲಿ. ನನಗೆ ಮಾತ್ರವಲ್ಲದೆ ಯಾವುದೇ ಚೇತನವನ್ನು ಉದ್ಧೇಶಿಸಿ ಯಾರೇ ” ಪಿಂಡ ದಾನ ” ಮಾಡಿದರೂ ಅವರೆಲ್ಲರಿಗೂ ನೀವು ಮುಕ್ತಿಯನ್ನು ಅನುಗ್ರಹಿಸಿರಿ.
ಇಲ್ಲಿ ವಾಸಿಯುವ ನನ್ನ ವಂಶದ ಬ್ರಾಹ್ಮಣರನ್ನು ಅಸುರನ ವಂಶದವರೆಂದು ಯಾರೊಬ್ಬರೂ ತಿರಸ್ಕರಿಸದೇ ಅವರಿಗೆ ಮನ್ನಣೆ ನೀಡಿ ಅವರನ್ನೇ ಶ್ರಾದ್ಧದಲ್ಲಿ ನಿಮಂತ್ರಿತರಾಗಿ ವರಿಸಿ ಪಿತೃಗಳ ಉದ್ಧೇಶ್ಯವಾಗಿ ಶ್ರಾದ್ಧ ಮಾಡಲಿ. ಇದರಿಂದ ಪಿತೃಗಳು ಸಂತುಷ್ಟರಾಗಲಿ. ಉದ್ಧಿಷ್ಟರಾದ ಚೇತನರು ಮುಕ್ತಿಯನ್ನು ಪಡೆಯಲಿ. ಈ ನನ್ನ ವಂಶದ ಬ್ರಾಹ್ಮಣರಿಗೆ ಶ್ರಾದ್ಧಾನ್ನ ಭೋಜನ ಮಾಡಿದ ದೋಷವು ತಟ್ಟದಿರಲಿ.
ನಾನು ತಲೆಯಿಟ್ಟಿರುವ ಸ್ಥಳವು ” ಗಯಾ ಶಿರಸ್ ” ಎಂದು ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಲಿ. ಇಲ್ಲಿ ಪಿತೃಗಳನ್ನು ಉದ್ಧೇಶಿಸಿ ಮಾಡಿದ ಪಿಂಡ ದಾನಗಳು ಪಿತೃಗಳಿಗೆ ಸಂತೋಷವನ್ನುಂಟು ಮಾಡಲಿ “
ಎಂದು ವರವನ್ನು ಬೇಡಿದನು. ಆ ಕೂಡಲೇ ಶ್ರೀ ಮಹಾವಿಷ್ಣುವು ” ತಥಾಸ್ತು ” ( ಹಾಗೆ ಆಗಲಿ ) ಎಂದು ಅನುಗ್ರಹಿಸಿ ತಕ್ಷಣದಲ್ಲಿ ಮುಕ್ತಿಯನ್ನೂ ಅನುಗ್ರಹಿಸಿದನು.
ಆದುದರಿಂದ ಈ ಕ್ಷೇತ್ರದಲ್ಲಿ ಮೃತಿ ಹೊಂದಿರುವ ಯಾವುದೇ ಚೇತನರನ್ನು ಉದ್ಧೇಶಿಸಿ ಶ್ರಾದ್ಧ, ಪಿಂಡ ದಾನಗಳನ್ನು ಮಾಡಿದರೂ ಅವರಿಗೆ ” ಮುಕ್ತಿ ಸಿದ್ಧ ” ಅಂತೆಯೇ ಪಿತೃಗಳೂ ವಿಶೇಷವಾದ ಸಂತೋಷವನ್ನು ಹೊಂದುತ್ತಾರೆ.
ಜೀವಂತವಾಗಿರುವ ಚೇತನರು ಪೂರ್ವದಲ್ಲಿ ತಾವು ಅನೇಕ ಜನ ಗಂಡು ಮಕ್ಕಳನ್ನು ಪಡೆದುಕೊಳ್ಳಬೇಕೆಂದು ಇಚ್ಛಿಸುತ್ತಿದ್ದರು. ಏಕೆಂದರೆ ಅವರಲ್ಲಿ ಒಬ್ಬರಾದರೂ ತನ್ನ ಮರಣಾ ನಂತರ ” ಗಯಾ ಕ್ಷೇತ್ರ ” ಕ್ಕೆ ಹೋಗಿ ತನಗೆ ಮುಕ್ತಿ ಸಿಗಲೆಂದು ಪಿಂಡದಾನ ಮಾಡುವಂತಾಗಲಿ ಎಂದು…
ಶ್ರೀ ವಾಲ್ಮಿಕೀ ರಾಮಾಯಣದ ಆಯೋಧ್ಯ ಕಾಂಡದಲ್ಲಿ….
” ಏಷ್ಟವ್ಯಾ: ಬಹವಃ ಪುತ್ರಾ:
ಯದ್ಯೇಕೋSಪಿ ಗಯಾ೦ ವ್ರಜೇತ್ ।।
ಶ್ರೀಮನ್ಮಹಾಭಾರತ ಆದಿ ಪರ್ವದಲ್ಲಿ 235, ವನ ಪರ್ವದಲ್ಲಿ 83, ವಾಯು ಪುರಾಣದಲ್ಲಿ 106 ಶ್ಲೋಕಗಳಲ್ಲಿ ಗಯಾ ಶ್ರಾದ್ಧದ ಮಹಿಮೆಯ ವಿಷಯ ಹೇಳಲ್ಪಟ್ಟಿದೆ.
ಶ್ರೀ ವಾಯುಪುರಾಣದಲ್ಲಿ ” ಗಯಾ ಶ್ರಾದ್ಧದ ಮಹಿಮೆ ” ಹೀಗಿದೆ…
ಗಯಾನಾಮ್ನಾ ಗಯಾಖ್ಯಾತಾ
ಕ್ಷೇತ್ರಂ ಬ್ರಹ್ಮಾಭಿಕಾಂಕ್ಷಿತಂ ।
ಕಾಂಕ್ಷ೦ತಿ ಪಿತರಃ
ಪುತ್ರಾನ್ ನರಕಾದ್ಭಯ ಭೀರವಃ ।।
ಗಯಾ೦ ಯಸ್ಯಾತಿ ಯಃ
ಪುತ್ರ : ಸ ನಸ್ತ್ರಾತಾ ಭವಿಷ್ಯತಿ ।
ಗಯಾ ಪ್ರಾಪ್ತ೦ ಸುತಂ
ದೃಷ್ಟ್ವಾ ಪಿತೃಣಾಮುತ್ಸವೋ ಭವೇತ್ ।।
ಪದ್ಭ್ಯಾಮಪಿ ಜಲಂ ಷ್ಟ್ರುಟ್ವಾ-
ಸೋsಸ್ಮಭ್ಯ೦ ಕಿಂ ನ ದಾಸ್ಯತಿ ।
ಗಯಾ೦ಗತ್ವಾನ್ನದಾತಾ
ಯಃ ಪಿತರಸ್ತೇನ ಪುತ್ರಿಣಃ ।।
ಪಕ್ಷತ್ರಯ ನಿವಾಸೀ ಚ
ಪುನತ್ಯಾಸಪ್ತಮಂ ಕುಲಮ್ ।
ಬ್ರಹ್ಮಹತ್ಯಾ ಸುರಾಪಾನಂ
ಸ್ತೇಯ೦ ಗುರ್ವಂಗನಾಗಮಃ ।।
ಪಾಪಂ ತತ್ಸಂಗಜಂ ಸರ್ವಂ
ಗಯಾಶ್ರಾದ್ಧಾದ್ವಿನಶ್ಯತಿ ।
ಆತ್ಮಜೋsಪ್ಯನ್ಯಜೋ ವಾಪಿ
ಗಯಾ ಭೂಮೌ ಯದಾ ತದಾ ।।
ಯನ್ನಾಮ್ನಾಪಾತಯೇತ್ಪಿಂಡಂ
ತನ್ನಯೇದ್ಬ್ರಹ್ಮಶಾಶ್ವತಂ ।
ನಾಮ ಗೋತ್ರೇ ಸಮುಚ್ಚಾರ್ಯ
ಪಿಂಡಪಾತನಮೀಕ್ಷತೇ ।।
ಯೇನಕೇನಾಪಿ ಕಸ್ಮೈ ಚಿತ್
ಸಯಾತಿ ಪರಮಾಂ ಗತಿಮ್ ।।
” ಗಯಾ ” ಎಂಬ ಹೆಸರಿನಿಂದ ಪ್ರಸಿದ್ಧವಾದ ಕ್ಷೇತ್ರವಾದರೂ ಶ್ರೀ ಬ್ರಹ್ಮಾದಿ ದೇವತೆಗಳಿಂದ ಇಚ್ಛಿಸಲ್ಪಟ್ಟುದಾಗಿದೆ. ( ತಾವು ಮಾಡಿರುವ ಕೆಟ್ಟ ಕರ್ಮಗಳ ಫಲವಾಗಿ ತಮಗೆ ಸಂಭವಿಸಬಹುದಾದ ನರಕಾದಿ ಲೋಕಗಳಿಂದ ಭಯಕ್ಕೆ ಒಳಗಾದ ಮೃತಿ ಹೊಂದಿದ ಪಿತೃಗಳಾದರೂ ತನ್ನ ಮಕ್ಕಳು ” ಗಯೆ ” ಗೆ ಹೋಗಿ ಅಲ್ಲಿ ತನಗೆ ಪಿಂಡ ದಾನವನ್ನು ಮಾಡಬೇಕೆಂದು ಇಚ್ಛಿಸುತ್ತಾರೆ.
ಯಾವ ಮಗನು ಗಯೆಗೆ ಹೋಗಿ ನಮ್ಮನ್ನುದ್ಧೇಶಿಸಿ ಪಿಂಡ ದಾನವನ್ನು ಮಾಡುತ್ತಾನೆಯೋ ಅವನೇ ನಮಗೆ ರಕ್ಷಕನಾಗಿರುತ್ತಾನೆ ಎಂಬ ಅಭಿಪ್ರಾಯದಿಂದ ಗಯೆಗೆ ಹೋದ ಮಗನನ್ನು ಕಂಡು ಪಿತೃಗಳು ಹರ್ಷ ಚಿತ್ತರಾಗುತ್ತಾರೆ.
ಕಾಲಿಂದಲಾದರೂ ( ಗಯೆಯಲ್ಲಿರುವ ಫಲ್ಗು ನದಿಯ ) ತೀರ್ಥವನ್ನು ಸ್ಪರ್ಶಿಸಿದವನು ನಮಗೆ ಏನನ್ನೂ ತಾನೇ ಕೊಡಲಾರ. ಗಯೆಗೆ ಹೋಗಿ ಮೃತರಾದ ಪಿತೃಗಳನ್ನುದ್ಧೇಶಿಸಿ ಅನ್ನ ದಾನವನ್ನು ಮಾಡುತ್ತಾರೆಯೋ, ಆ ಪುತ್ರನಿಂದಲೇ ಮೃತರಾದವರು ಪುತ್ರನನ್ನು ಹೊಂದಿದ ಭಾಗ್ಯವನ್ನು ಪಡೆದವರಾಗಿ ” ಪುತ್ರೀ ” ಎಂಬ ಶಬ್ದಕ್ಕೆ ಅರ್ಹರಾಗುತ್ತಾರೆ.
ಗಯಾ ಕ್ಷೇತ್ರದಲ್ಲಿ ಮೂರು ಪಕ್ಷಗಳು ವಾಸವಾಗಿದ್ದು – ಅನ್ನ ಶ್ರಾದ್ಧ, ಹಿರಣ್ಯ ಶ್ರಾದ್ಧ ಅಥವಾ ಆಮ ಶ್ರಾದ್ಧ ಅಥವಾ ತರ್ಪಣ ರೂಪದಲ್ಲಿ ತೀರ್ಥ ಶ್ರಾದ್ಧವನ್ನಾದರೂ ಮಾಡುವವನು ತನ್ನ ಹಿಂದಿನ ಏಳು ತಲೆಮಾರಿನ ಪಿತೃಗಳನ್ನು – ಅವರ ಪಾಪ ಕರ್ಮಗಳಿಂದ ಬಿಡಿಸಿ ಶುದ್ಧಿ ಗೊಳಿಸುತ್ತಾನೆ!
ಗಯಾ ಶ್ರಾದ್ಧ ಮಾಡುವವನಿಗೂ ಮತ್ತು ಅವನ ವಂಶದಲ್ಲಿ ಜನಿಸಿ ಮೃತಿ ಹೊಂದಿದವರಿಗೂ ಸಂಭವಿಸಿದ ಬಹಳ ಘೋರವಾದ ಬ್ರಹ್ಮಹತ್ಯಾ, ಸುರಾಪಾನ, ಸ್ವರ್ಣಸ್ತೇಯ, ತಾಯಿಯೇ ಮೊದಲಾದ ಹಿರಿಯ ಸ್ತ್ರೀಯರೊಡನೆ ಲೈಂಗಿಕ ಸಂಬಂಧ ಇವೇ ಮೊದಲಾದ ಪಾಪಗಳು ” ಗಯಾ ಶ್ರಾದ್ಧ ” ಮಾಡುವುದರಿಂದ ನಾಶವಾಗುತ್ತದೆ.
ತನ್ನ ಸ್ವಂತ ಮಗನೇ ಆಗಲೀ ಅಥವಾ ಬೇರಾರ ಮಗನೇ ಆಗಲೀ ಮೃತಿ ಹೊಂದಿದ ಯಾವ ಚೇತನನ ಗೋತ್ರ, ಹೆಸರನ್ನು ಹೇಳಿ ಯಾವಾಗ ಗಯಾ ಕ್ಷೇತ್ರದಲ್ಲಿ ಪಿಂಡ ದಾನ ಮಾಡುತ್ತಾನೆಯೋ ಆ
ಕ್ಷಣದಲ್ಲಿಯೇ ಅವನು ಕೊಟ್ಟ ಪಿಂಡಕ್ಕೆ ಪಾತ್ರನಾದ ಚೇತನನು ಬ್ರಹ್ಮ ಸಾಯುಜ್ಯವನ್ನು ಪಡೆಯುತ್ತಾನೆ.
ಪಿತೃಪಕ್ಷದ ದಿನಾಂಕ ಮತ್ತು ದಿನದ ಮಹತ್ವ :
ಈ ವರ್ಷದ ಪಿತೃಪಕ್ಷ ಎಂದಿನಿಂದ ಆರಂಭವಾಗಲಿದೆ, ಯಾವ ದಿನ ಪೂಜೆಗೆ ಮಹತ್ವ,
ಈ ವರ್ಷ ಅಂದರೆ 2021ನೇ ಸಾಲಿನಲ್ಲಿ ಸೆಪ್ಟೆಂಬರ್ 21 ಮಂಗಳವಾರ ಆರಂಭವಾಗಿ ಅಕ್ಟೋಬರ್ 6 ಬುಧವಾರದವರೆಗೂ ಪಿತೃಪಕ್ಷವಿದೆ. ಸರ್ವ ಪಿತೃ ಶ್ರಾದ್ಧ / ಅಮಾವಾಸ್ಯೆ ಅಥವಾ ಮಹಾಲಯ ಅಮಾವಾಸ್ಯೆಯನ್ನು ಅಂತಿಮ ದಿನ ಅಂದರೆ 6ನೇ ಅಕ್ಟೋಬರ್ 2021 ರಂದು ಬುಧವಾರ ಆಚರಿಸಲಾಗುತ್ತದೆ.
ದಿನಾಂಕ – ದಿನ – ತಿಥಿ – ಶ್ರಾದ್ಧ
- * 20-09- 2021 – ಸೋಮವಾರ – ಶುಕ್ಲ ಪೂರ್ಣಿಮಾ -ಪೂರ್ಣಿಮಾ ಶ್ರಾದ್ಧ
- * 21- 09-2021 – ಮಂಗಳವಾರ – ಕೃಷ್ಣ ಪ್ರತಿಪದ – ಪ್ರತಿಪದ ಶ್ರಾದ್ಧ
- * 22- 09-2021 – ಬುಧವಾರ – ಕೃಷ್ಣ ದ್ವಿತೀಯ – ದ್ವಿತೀಯ ಶ್ರಾದ್ಧ
- * 23-09-2021 – ಗುರುವಾರ – ಕೃಷ್ಣ ತೃತೀಯ – ತೃತೀಯ ಶ್ರಾದ್ಧ
- * 24- 09-2021 – ಶುಕ್ರವಾರ – ಭರಣಿ ನಕ್ಷತ್ರ – ಮಹಾ ಭರಣಿ
- * 24-09-2021 – ಶುಕ್ರವಾರ – ಕೃಷ್ಣ ಚತುರ್ಥಿ – ಚತುರ್ಥಿ ಶ್ರಾದ್ಧ
- * 25-09- 2021 – ಶನಿವಾರ – ಕೃಷ್ಣ ಪಂಚಮಿ – ಪಂಚಮಿ ಶ್ರಾದ್ಧ
- * 26-09-2021 – ಭಾನುವಾರ – ಕೃಷ್ಣ ಷಷ್ಠಿ – ಷಷ್ಠಿ ಶ್ರಾದ್ಧ
- * 28-09-2021 – ಮಂಗಳವಾರ – ಕೃಷ್ಣ ಸಪ್ತಮಿ – ಸಪ್ತಮಿ ಶ್ರಾದ್ಧ, ವ್ಯತೀಪಾತ ಮಹಾಲಯ
- * 29-09-2021 – ಬುಧವಾರ – ಕೃಷ್ಣ ಅಷ್ಟಮಿ – ಅಷ್ಟಮಿ ಶ್ರಾದ್ಧ
- * 30-09-2021 – ಗುರುವಾರ – ಕೃಷ್ಣ ನವಮಿ – ನವಮಿ ಶ್ರಾದ್ಧ, ಅವಿಧವಾ ನವಮೀ
- * 01-10-2021 – ಶುಕ್ರವಾರ – ಕೃಷ್ಣ ದಶಮಿ – ದಶಮಿ ಶ್ರಾದ್ಧ
- * 02-10-2021 – ಶನಿವಾರ – ಕೃಷ್ಣ ಏಕಾದಶೀ – ಏಕಾದಶೀ ಶ್ರಾದ್ಧ
- * 03-10-2021 – ಭಾನುವಾರ – ಕೃಷ್ಣ ದ್ವಾದಶೀ – ದ್ವಾದಶೀ ಶ್ರಾದ್ಧ, ಮಾಘ ನಕ್ಷತ್ರ – ಮಾಘ ಶ್ರಾದ್ಧ, ಯತಿ ಮಹಾಲಯ
- * 04-10-2021 – ಸೋಮವಾರ – ಕೃಷ್ಣ ತ್ರಯೋದಶಿ – ತ್ರಯೋದಶಿ ಶ್ರಾದ್ಧ
- * 05-10-2021 – ಮಂಗಳವಾರ – ಕೃಷ್ಣ ಚತುರ್ದಶಿ – ಚತುರ್ದಶಿ ಶ್ರಾದ್ಧ, ಘಾತ ಚತುರ್ದಶೀ, ವಿಷಶಸ್ತ್ರಹತಾದೀನಾಂ ಮಹಾಲಯಃ
- * 06-10-2021 – ಬುಧವಾರ – ಕೃಷ್ಣ ಅಮಾವಾಸ್ಯೆ – ಸರ್ವ ಪಿತೃ ಅಮಾವಾಸ್ಯೆ ಮಹಾಲಯ ಅಮಾವಾಸ್ಯೆ ಶ್ರಾದ್ಧ ಮುಹೂರ್ತ
- * 6ನೇ ಅಕ್ಟೋಬರ್ ಬುಧವಾರ ಮಹಾಲಯ ಅಮಾವಾಸ್ಯೆ ಆಚರಿಸಲಾಗುತ್ತದೆ.
- * ಹಗಲು ಮೂಹೂರ್ತ : ಬೆಳಿಗ್ಗೆ 11.45 ರಿಂದ ಮಧ್ಯಾಹ್ನ 12.32
- * ರೋಹಿಣಿ ಮುಹೂರ್ತ: ಮಧ್ಯಾಹ್ನ 12.32 ರಿಂದ 1.19
- * ಅಪರಾಹ್ನ ಮುಹೂರ್ತ: ಮಧ್ಯಾಹ್ನ 1.19 ರಿಂದ 3.40
- * ಅಮಾವಾಸ್ಯೆ ತಿಥಿ ಆರಂಭ: ಅಕ್ಟೋಬರ್ 5ರಂದು ಸಂಜೆ 06:09 ರಿಂದ
- * ಅಮಾವಾಸ್ಯೆ ತಿಥಿ ಅಂತ್ಯ: ಅಕ್ಟೋಬರ್ 6ರಂದು ಸಂಜೆ 4:51 ರವರೆಗೆ
