ಸಂಕಷ್ಟ ಚತುರ್ಥಿಯ ಆಚರಣೆ, ಮಹತ್ವ ಮತ್ತು ಧನಪ್ರಾಪ್ತಿಯ ಮಾರ್ಗ
Index of Important Points
ನಮ್ಮ ಧರ್ಮದಲ್ಲಿ ಸಂಕಷ್ಟಿಗೆ ವಿಶೇಷವಾದ ಮಹತ್ವವಿದೆ. ಅದರಲ್ಲೂ ಮಂಗಳವಾರ ಬರುವ ಸಂಕಷ್ಟಿಯನ್ನು ಅಂಗಾರಕ ಸಂಕಷ್ಟಿ ಎಂದು ಕರೆಯಲಾಗುತ್ತದೆ.
ಈ ದಿನದಂದು ಸಂಕಷ್ಟಿಯ ವ್ರತವನ್ನು ಕೈಗೊಂಡರೆ ಇಪ್ಪತ್ತೊಂದು ಸಂಕಷ್ಟಿ ವ್ರತ ಮಾಡಿದಷ್ಟು ಪುಣ್ಯ ಪ್ರಾಪ್ತಿಯಾಗುತ್ತದೆ.
ಸಂತಾನ ಪ್ರಾಪ್ತಿ ಹಾಗೂ ಖುಷಿ ಜೀವನ ನಮ್ಮದಾಗಬೇಕು ಎಂಬ ನಿಟ್ಟಿನಲ್ಲಿ ಸಂಕಲ್ಪ ಮಾಡಿ ಈ ವ್ರತವನ್ನು ಕೈಗೊಳ್ಳಲಾಗುತ್ತದೆ. ಅಲ್ಲದೆ, ಇದರಿಂದ ನಮ್ಮ ಇಷ್ಟಾರ್ಥಗಳು ಪೂರೈಸುತ್ತದೆ ಎಂದೂ ಹೇಳಲಾಗುತ್ತದೆ.
ಸಂಕಟವನ್ನು ನಿವಾರಿಸುವ ಗಣೇಶ ಚತುರ್ಥಿ ಎಂದೇ ಇದನ್ನು ಕರೆಯಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಅನುಸಾರ ಸಂಕಷ್ಟ ಚತುರ್ಥಿಯ ದಿನ ಗಣಪತಿಗೆ ಪೂಜೆ ಕೈಗೊಂಡ ಬಳಿಕ ರಾತ್ರಿ ಚಂದ್ರನಿಗೆ ಅರ್ಘ್ಯ ಕೊಟ್ಟು ವ್ರಥವನ್ನು ಸಮಾಪ್ತಿಗೊಳಿಸಲಾಗುತ್ತದೆ.
ಈ ಸಂಕಷ್ಟ ವ್ರತವನ್ನು ಮಾಡುವುದರಿಂದ ಗ್ರಹಗಳ ದೋಷವಿದ್ದರೂ ನಿವಾರಣೆಯಾಗಲಿದೆ. ವಿಘ್ನನಿವಾರಕ ಅದನ್ನು ದೂರ ಮಾಡಲಿದ್ದಾನೆ ಎಂದೂ ಹೇಳಲಾಗುತ್ತದೆ.
ಸಂಕಷ್ಟ ಚತುರ್ಥಿಯ ಪೂಜಾ ವಿಧಿವಿಧಾನ ಆಚರಣೆ:
- ಪ್ರಾತಃ ಕಾಲದಲ್ಲಿ ಸ್ನಾನ ಮಾಡಿ ಶುಚಿಯಾದ ನಂತರ ಗಣೇಶನ ಪೂಜೆ ಮಾಡಬೇಕು.
- ಸೂರ್ಯಾಸ್ತದ ನಂತರ ಮತ್ತೊಮ್ಮೆ ಸ್ನಾನ ಮಾಡಿ ಸ್ವಚ್ಛ ವಸ್ತ್ರವನ್ನು ಧರಿಸಬೇಕು.
- ಗಣೇಶನ ಮೂರ್ತಿಯ ಹತ್ತಿರ ಒಂದು ಕಲಶದಲ್ಲಿ ನೀರು ತುಂಬಿಡಬೇಕು.
- ನಂತರ ಧೂಪ, ದೀಪ, ನೈವೇದ್ಯ, ಹೂವು-ಹಣ್ಣು, ಬೆಲ್ಲ, ತುಪ್ಪ, ಕಲ್ಲುಸಕ್ಕರೆ ಸೇರಿದಂತೆ ಇತರ ವಸ್ತುಗಳನ್ನು ಸಮರ್ಪಿಸಬೇಕು.
- ಗಣೇಶನಿಗೆ ಪ್ರಿಯವಾದ ದೂರ್ವೆ (ಗರಿಕೆ)ಯನ್ನು ಅರ್ಪಿಸಬೇಕು.
- ನಂತರ ಗಣೇಶ ಚಾಲೀಸ, ಗಣೇಶ ಸ್ತುತಿ ಮತ್ತು ಗಣೇಶ ಸ್ತೋತ್ರವನ್ನು ಪಠಿಸಬೇಕು.
- ಚಂದ್ರೋದಯದ ನಂತರ ಚಂದ್ರನನ್ನು ನೋಡಿ ಚಂದ್ರನಿಗೆ ಅರ್ಘ್ಯ ಕೊಟ್ಟು ವ್ರತವನ್ನು ಸಂಪನ್ನಗೊಳಿಸಲಾಗುವುದು
ಸಂಕಷ್ಟ ಚತುರ್ಥಿಯಂದು ಧನ ಪ್ರಾಪ್ತಿಗೆ ಕೆಳಗಿನ ಅಂಶಗಳನ್ನು ಪರಿಗಣಿಸಿ ಮತ್ತು ಆಚರಿಸಿ:
- ಹಳದಿ ಬಣ್ಣದ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಪೂಜಿಸಬೇಕು.
- ಮೋದಕವನ್ನು ನೈವೇದ್ಯ ಮಾಡಬೇಕು.
- ಹಳದಿ ಬಣ್ಣದ ಆಸನದ ಮೇಲೆ ಕುಳಿತು 108 ಬಾರಿ “ಓಂ ಹೇರಂಬಾಯ ನಮಃ” ಜಪವನ್ನು ಮಾಡಬೇಕು. ಇದನ್ನು ಸಂಕಷ್ಟಿಯಂದು ಮಾತ್ರವಲ್ಲದೆ 27 ದಿನಗಳ ಕಾಲ ಜಪ ಮಾಡಿದರೆ ಇಷ್ಟಾರ್ಥಗಳು ಲಭಿಸುತ್ತದೆಂದು ಹೇಳಲಾಗುತ್ತದೆ.
- ಇದರಿಂದ ಧನಪ್ರಾಪ್ತಿಯಾಗುತ್ತದೆ.
- ಸಂಕಷ್ಟ ಚತುರ್ಥಿಯ ದಿನದಂದು 27 ಗರಿಕೆಯನ್ನು ಒಂದು ದಾರದಲ್ಲಿ ಕಟ್ಟಿ ಅದನ್ನು 11 ದಿನಗಳ ವರೆಗೆ ಪ್ರತಿದಿನ ಗಣೇಶನಿಗೆ ಅರ್ಪಿಸಿದರೆ ಮನೋವಾಂಛಿತ ಫಲ ಸಿದ್ಧಿಸುತ್ತದೆಂದು ಹೇಳಲಾಗುತ್ತದೆ.