ಶಂಕರಾಚಾರ್ಯ

ಶಂಕರಾಚಾರ್ಯರ ಪೀಠಗಳ ವಿವರ ದಶನಾಮೀ ಪದ್ಧತಿ

ಆಮ್ನಾಯ ಪೀಠಗಳ ವಿವರ

  • 🔥1)ಗೋವರ್ಧನ ಪೀಠ–ಹಸ್ತಾಮಲಕಾಚಾರ್ಯರು–ಮಹಾವಾಕ್ಯ–ಪ್ರಜ್ಞಾನಂ ಬ್ರಹ್ಮ–ಋಗ್ವೇದ–ಐತ್ತರೇಯ ಉಪನಿಷತ್–ಭೋಗವಾಲ ಸಂಪ್ರದಾಯ
  • 🔥2)ಶಾರದಾ ಪೀಠ–ಸುರೇಶ್ವರಾಚಾರ್ಯರು–ಮಹಾವಾಕ್ಯ–ಅಹಂ ಬ್ರಹ್ಮಾಸ್ಮಿ–ಯಜುರ್ವೇದ–ಬ್ರಹದಾರಣ್ಯಕ ಉಪ.–ಭೂರಿವಾಲ ಸಂಪ್ರದಾಯ
  • 🔥3)ದ್ವಾರಕಾ ಪೀಠ–ಪದ್ಮಪಾದಾಚಾರ್ಯರು–ಮಹಾವಾಕ್ಯ–ತತ್ವಮಸೀ–ಸಾಮವೇದ–ಛಾಂದೋಗ್ಯ ಉಪನಿಷತ್–ಕೀಟವಾಲ ಸಂಪ್ರದಾಯ
  • 🔥4)ಜ್ಯೋತಿರ್ಮಠ–ತೋಟಕಾಚಾರ್ಯರು–ಮಹಾವಾಕ್ಯ–ಅಯಮಾತ್ಮಾ ಬ್ರಹ್ಮ–ಅಥರ್ವ ವೇದ– ಮಾಂಡೂಕ್ಯ ಉಪ.–ನಂದವಾಲ ಸಂಪ್ರದಾಯ

🔥ದಶನಾಮೀ ಪದ್ಧತಿ

ಶಂಕರಾಚಾರ್ಯರು ಏಕದಂಡಿ ಸಂಪ್ರದಾಯವನ್ನು ಪ್ರಾರಂಭಿಸಿದರು. ಈ ಸಂಪ್ರದಾಯದ ಸಂನ್ಯಾಸಿಗಳು ತಮ್ಮ ಹೆಸರಿನ ಮುಂದೆ ದಶನಾಮಗಳಲ್ಲಿ ಒಂದನ್ನು ಇಟ್ಟುಕೊಳ್ಳುತ್ತಾರೆ. ಅವು ಯಾವುವೆಂದರೆ ಸರಸ್ವತಿ, ತೀರ್ಥ, ಅರಣ್ಯ, ಭಾರತೀ, ಆಶ್ರಮ, ಗಿರಿ, ಪರ್ವತ, ಸಾಗರ, ವನ ಮತ್ತು ಪುರಿ. ಸರಸ್ವತಿ, ಭಾರತಿ ಮತ್ತು ಪುರಿ ಉಪನಾಮಗಳು ಶೃಂಗೇರಿ ಮಠಕ್ಕೆ ಸೇರಿವೆ. ತೀರ್ಥ, ಆಶ್ರಮ ನಾಮಗಳು ದ್ವಾರಕಾ ಪೀಠಕ್ಕೆ ಸೇರಿವೆ. ಗಿರಿ, ಪರ್ವತ, ಸಾಗರ ಜ್ಯೋತಿರ್ಮಠಕ್ಕೆ ಸೇರಿವೆ. ಉಳಿದವು ಸ್ವತಂತ್ರ ಸಂಪ್ರದಾಯ ಹೊಂದಿವೆ. ಆದರೂ ಇದು ಅಷ್ಟೇನೂ ಬಿಗಿಯಾದ ನಿಯಮವಿದ್ದಂತೆ ಕಾಣುವುದಿಲ್ಲ. ಕಾರಣ ಅರಣ್ಯನಾಮದ ವಿದ್ಯಾರಣ್ಯರು ಶೃಂಗೇರಿ ಮಠದ ಪೀಠಾಧಿಪತಿಗಳಾಗಿದ್ದರು.

🔥ಷಣ್ಮತ ಸ್ಥಾಪನೆ

ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಮತ್ತು ಸ್ಕಂದ ಈ ದೇವರುಗಳ ಆರಾಧಕರು ಪರಸ್ಪರ ತಾವು ಮೇಲು, ತಾವು ಮೇಲೆಂದು ಜಗಳವಾಡುತ್ತಿದ್ದುದನ್ನು ನಿಲ್ಲಿಸಿ, ಅವೆಲ್ಲವೂ ಒಬ್ಬನೇ ಈಶ್ವರನ ಬೇರೆ ಬೇರೆ ರೂಪಗಳೆಂದು ಆರಾಧಕರನ್ನು ಒಪ್ಪಿಸಿ, ಈ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೆ ಪೂಜಿಸಬೇಕೆಂದು ನಿಯಮವನ್ನು ಮಾಡಿದರು. ತಾವು ಉಪಾಸನೆ ಮಾಡುವ ದೇವತೆಯನ್ನು ಮಧ್ಯೆ ಇಟ್ಟು ಉಳಿದ ದೇವತೆಗಳನ್ನು ಅದರ ಸುತ್ತಾ ಇಟ್ಟು, ಅದನ್ನು ಮುಖ್ಯ ದೇವತೆಯ ಪರಿವಾರವೆಂದು ಪೂಜಿಸಲು ಹೇಳಿದರು. ಈ ಪದ್ಧತಿ ಅಂದಿನಿಂದ ಶುರುವಾಯಿತು. ಈ ಕಾರಣದಿಂದ ಶಂಕರರಿಗೆ ಷಣ್ಮತಸ್ಥಾಪಕರೆಂದು ಹೆಸರಾಯಿತು.

🔥ನಿರಾಕಾರ ಪರಬ್ರಹ್ಮ ಸಾಕ್ಷಾತ್ಕಾರಕ್ಕೆ ಇರುವ ಮಾರ್ಗಗಳಲ್ಲಿ ಶ್ರೀಚಕ್ರ ಉಪಾಸನೆಯೂ ಒಂದು. ಶಂಕರರ ಕಾಲದಲ್ಲಿ ಶ್ರೀ ಚಕ್ರ ಪೂಜೆಯು ಉಗ್ರಶಕ್ತಿಯ ಉಪಾಸನೆಯಾಗಿತ್ತು. ಶಂಕರರು ತಮ್ಮ ಅದ್ವೈತ ಸಿದ್ಧಾಂತದ ಸ್ಥಾಪನೆಯನ್ನು ಮಾಡಬೇಕಿತ್ತು.

 ಅದ್ವೈತ ಸಿದ್ಧಾಂತದ ಸ್ಥಾಪನೆಯ ಹಿನ್ನೆಲೆಯಲ್ಲಿ ನಿರಾಕಾರ ಪರತತ್ವದ ಸ್ಥಾಪನೆ, ಪ್ರತಿಮಾ ಪೂಜೆಗಳಿಂದ ಹೊರತಾದ ಪರಬ್ರಹ್ಮದ ಅರ್ಚನೆಯಾಗಬೇಕಿತ್ತು. ಆದರೆ ಸಾಮಾನ್ಯ ಜನರಿಗೆ ಆಕಾರಸಹಿತವಾಗಿರುವ ದೇವ-ದೇವಿಯರನ್ನು ಪೂಜಿಸಿಯೇ ರೂಢಿ. ಈ ಹಿನ್ನೆಲೆಯಲ್ಲಿ ಆಕಾರಸಹಿತವಾದ ಪ್ರತಿಮೆ, ನಿರಾಕಾರವಾಗಿರುವ ಪರಬ್ರಹ್ಮ ಎರಡರ ಮಧ್ಯದಲ್ಲಿ ಒಂದು ಸಾಧನ ಬೇಕಿತ್ತು. ಅದಕ್ಕಾಗಿ ಶಂಕರರು ಶ್ರೀ ಚಕ್ರವನ್ನು ಆಯ್ಕೆ ಮಾಡಿಕೊಂಡರು. ಆದರೆ ಭಂಡಾಸುರನ ವಧೆಯ ಕಾರಣವಾಗಿ ಉಗ್ರಶಕ್ತಿ ಸೋಪಾನವಾಗಿದ್ದ ಶ್ರೀ ಚಕ್ರವನ್ನು ಯಥಾಸ್ಥಿತಿಯಲ್ಲಿ ಉಪಾಸನೆ ಜನಸಾಮಾನ್ಯರಿಗೆ ಸಾಧ್ಯವಿರಲಿಲ್ಲ. ಶ್ರೀಚಕ್ರವಿದ್ದಲ್ಲಿಗೆ ಹೋಗಿ ಶ್ರೀಚಕ್ರವನ್ನು ಪರಿಷ್ಕರಿಸಿ ಸಾತ್ವಿಕರೂಪವು ಉಗಮಿಸುವಂತೆ ಸಾತ್ವಿಕ ಶ್ರೀಚಕ್ರ ಸ್ಥಾಪನೆ ಮಾಡಬೇಕು. ಅದು ಸಾಧ್ಯವಾದರೆ, ಆ ಶ್ರೀಚಕ್ರಾರ್ಚನೆ ಮೂಲಕ ಪ್ರತಿಮಾ ಪೂಜೆಯನ್ನು ಮೀರಿ ನಿರಾಕಾರ ಪರಬ್ರಹ್ಮದ ಕಡೆಗೆ ಹೋಗುವ ಪಥದಲ್ಲಿ ಒಂದು ಸಾಧನವನ್ನು ಸ್ಥಾಪನೆ ಮಾಡಿದಂತಾಗುತ್ತದೆ. ಉಗ್ರಶಕ್ತಿಯ ಶ್ರೀಚಕ್ರಗಳಿದ್ದ ದೇವಾಲಯಗಳ ಪೈಕಿ ಅತೀ ಉಗ್ರ ಶ್ರೀಚಕ್ರ ಇದ್ದದ್ದು ಮಧುರೆಯ ಮೀನಾಕ್ಷೀ ದೇವಾಲಯದಲ್ಲಿ. ಶ್ರೀಚಕ್ರವನ್ನು ಸಾತ್ವಿಕವಾಗಿ ಪರಿಷ್ಕರಿಸಲು ಶಂಕರಾಚಾರ್ಯರು ಮಧುರೆಯ ಮೀನಾಕ್ಷೀ ದೇವಾಲಯವನ್ನೇ ಆಯ್ಕೆಮಾಡಿಕೊಂಡರು. ಸಂಖ್ಯಾಶಾಸ್ತ್ರ, ಅಕ್ಷರಶಾಸ್ತ್ರದ ಅನುಗುಣವಾಗಿ ಘೋರಮಂತ್ರಗಳನ್ನು (ಘೋರಾಕ್ಷರ) ತೆಗೆದು, ತ್ರಿಕೋನಗಳ ಸಹಿತ ಸಾತ್ವಿಕ ಅಕ್ಷರಗಳನ್ನು ರಚಿಸಿ, ಸಾತ್ವಿಕ ಬೀಜಾಕ್ಷರಗಳ ಅಳವಡಿಕೆಯಿಂದ ಶ್ರೀಚಕ್ರದ ಪರಾಶಕ್ತಿಯ ಚಟುವಟಿಕೆಯನ್ನು ನಿಗ್ರಹಿಸಿದರು. ಸಾತ್ವಿಕ ಶ್ರೀಚಕ್ರಸೃಷ್ಟಿ ಆದುದು ಹೀಗೆ.

🔥ಶಂಕರಾಚಾರ್ಯರು ಎಲ್ಲಾ ದೇವ-ದೇವಿಯರ ಮೇಲೂ ಛಂದೋಬದ್ಧವಾದ, ಆರ್ಥಗರ್ಭಿತವಾದ, ಮನೋಹರವಾದ, ಭಕ್ತಿಯಿಂದ ಸ್ತುತಿಸಿದರೆ ಇಷ್ಟಾರ್ಥವನ್ನು ಕೈಗೂಡಿಸುವಂತಹ ಅಸಂಖ್ಯ ಸ್ತೋತ್ರಗಳನ್ನು ರಚಿಸಿದ್ದಾರೆ. ಏಕಶ್ಲೋಕಿಯಿಂದ ಹಿಡಿದು ದಶ ಶ್ಲೋಕಿ, ಶತಶ್ಲೋಕಿ, 580 ಶ್ಲೋಕಗಳಿರುವ ವಿವೇಕ ಚೂಡಾಮಣಿ, ಉಪದೇಶ ಸಾಹಸ್ರೀವರೆಗೂ ಇವರ ರಚನೆಗಳಿವೆ. ಚಿಕ್ಕವಯಸ್ಸಿನವರಿಗೆ ಸುಲಭವಾದ ರಚನೆಗಳಿದ್ದರೆ, ಪಂಡಿತರಿಗೆ ಅಷ್ಟೇ ಕ್ಲಿಷ್ಟವಾದ ರಚನೆಗಳೂ ಇವೆ.

🔥ಶಂಕರ ಅದ್ವೈತ ಸಿದ್ಧಾಂತ ತತ್ವಗಳು—-ಮೂಲತತ್ವ–ಬ್ರಹ್ಮ ಒಂದೇ ಸತ್ಯ. ಜಗತ್ತು. ಬ್ರಹ್ಮವು ಜ್ಞಾನಸ್ವರೂಪವಾಗಿದೆ.. ಅದು ಸಚ್ಚಿದಾನಂದ ಸ್ವರೂಪ, ನಿರಾಕಾರ, ನಿರ್ಗುಣ. ಭೂತ, ಭವಿಷ್ಯತ್, ವರ್ತಮಾನಗಳಲ್ಲಿ ಬಾಧಿತವಾಗದೇ ಇರುವುದು ಬ್ರಹ್ಮವೊಂದೇ.

🔥ಮನಸ್ಸು, ಬುದ್ಧಿ, ಅಹಂಕಾರ ಮತ್ತು ಚಿತ್ತದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಅವಿದ್ಯೆಯಿಂದ (ಅಜ್ಞಾನದಿಂದ) ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು. ಈ ಜ್ಞಾನವನ್ನು ಪಡೆಯಲು ನಾಲ್ಕು ಸಾಧನೆಗಳು ಅವಶ್ಯ. ಅವು ಯಾವುವೆಂದರೆ——

  • 🕉️1) ನಿತ್ಯಾನಿತ್ಯ ವಿವೇಕ-ಬ್ರಹ್ಮವೊಂದೇ ಸತ್ಯ, ಉಳಿದವು ಅನಿತ್ಯ ಎಂಬ ವಿವೇಕ.
  • 🕉️2) ಇಹಾಮುತ್ರ ಫಲಭೋಗ ವಿರಾಗ. ಈ ಲೋಕದ ಮತ್ತು ಪರಲೋಕದ ಭೋಗದ ಬಗಗೆ ವಿರಕ್ತಿ.
  • 🕉️3) ಶಮ ದಮಾದಿ ಷಟ್ಕ ಸಂಪತ್ತಿ—ಅ) ಶಮ–ಅಂತರಂಗದ ಇಂದ್ರಿಯಗಳ ಹತೋಟಿ. ಆ) ದಮ–ಬಹಿರಿಂದ್ರಿಯ ನಿಗ್ರಹ, (ಇ) ಉಪರತಿ–ಕರ್ಮಫಲ ತ್ಯಾಗ., (ಈ) ತಿತಿಕ್ಷ–ಸಹನೆ, (ಉ) ಚಿತ್ತದ ಏಕಾಗ್ರತೆ, (ಊ) ಶ್ರದ್ಧೆ–ಗುರು ಹಾಗೂ ವೇದಾಂತದಲ್ಲಿ ನಿಷ್ಠೆ.
  • 🕉️4) ಮುಮುಕ್ಷತ್ತ್ವ– ಮೋಕ್ಷ ಬೇಕೆಂಬ ತೀವ್ರ ಅಪೇಕ್ಷೆ

ಈ ಮೇಲೆ ನಮೂದಿಸಿದ ನಾಲ್ಕು ಸಾಧನೆಗಳ ಜೊತೆಗೆ, ಶ್ರವಣ, ಮನನ ಮತ್ತು ನಿಧಿಧ್ಯಾಸನ ಎಂಬ ಮೂರೂ ವಿಧದ ಸಾಧನೆಯೂ ಜ್ಞಾನದ ಪ್ರಾಪ್ತಿಗೆ ಅವಶ್ಯ.

🕉️ಶ್ರೀ ಶಂಕರರು ಬದುಕಿದ್ದು ಕೇವಲ 32 ವರ್ಷ. ಆದರೆ ಅವರು ತಮ್ಮ ಜೀವಿತದ ಪ್ರತಿಯೊಂದು ಕ್ಷಣವನ್ನೂ ಸಾರ್ಥಕವಾಗುವಂತೆ ಕೆಲಸಮಾಡಿದರು. ಅವರ ಬಗಗೆ ಜನಶ್ರುತಿ ಹೀಗಿದೆ–

ಅಷ್ಟವರ್ಷೇ ಚತುರ್ವೇದೀ, ದ್ವಾದಶೇ ಸರ್ವಶಾಸ್ತ್ರವಿತ್,

ಷೋಡಶೇ ಕೃತವಾನ್ ಭಾಷ್ಯಂ, ದ್ವಾತ್ರಿಂಶೇ ಮುನಿರಭ್ಯಗಾತ್॥

🔥ಅರ್ಥ—8ನೇ ವರ್ಷಕ್ಕೆ 4 ವೇದಗಳನ್ನು ಕಲಿತವರು, 12ನೇ ವರ್ಷಕ್ಕೆ ಸರ್ವ ಶಾಸ್ತ್ರಗಳನ್ನೂ ತಿಳಿದವರು, 16ನೇ ವರ್ಷದಲ್ಲಿ ಭಾಷ್ಯಗಳನ್ನು ಬರೆದವರು, 32ನೇ ವರ್ಷದಲ್ಲಿ ಹೊರಟುಹೋದರು.

🔥ಇಂಥಾ ಮಹಾಮಹಿಮರಾದ, ಅದ್ಭುತ ಕಾರ್ಯಗಳನ್ನು ಎಸಗಿದ, ಯತಿಚಕ್ರವರ್ತಿಯಾದ, ಆಚಾರ್ಯವರ್ಯರಾದ ಶ್ರೀ ಶಂಕರಾಚಾರ್ಯರಿಗೆ ಅನಂತಾನಂತ ಕೋಟಿಕೋಟಿ ನಮನಗಳು.

॥ಜಯತು ಜಯತು ನಿತ್ಯಂ ಶಂಕರಾಚಾರ್ಯವರ್ಯಾ

ಜಯತು ಜಯತು ತಸ್ಯ ಅದ್ವೈತವಿದ್ಯಾ ಅನವದ್ಯಾ।

॥ಜಯತು ಜಯತು ಲೋಕೇ ತಚ್ಚರಿತ್ರಂ ಪವಿತ್ರಂ

॥ಜಯತು ಜಯತು ಭಕ್ತಿಸ್ತತ್ಪದಾಬ್ಜೇ ಜನಾನಾಂ॥

ಶಂಕರಾಚಾರ್ಯರ ಅದ್ವೈತ ವೇದಾಂತ ತತ್ವ ಸನಾತನ ಧರ್ಮ ಉಳಿಯಲು ದೊಡ್ಡ ಕೊಡುಗೆ 

ಶಂಕರರಿಲ್ಲದಿದ್ದಿದ್ದರೆ ಇಂದು ವೇದಾಂತ ತತ್ವ ಯಾರಿಗೂ ಅರ್ಥವಾಗುತ್ತಿರಲಿಲ್ಲ, ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ!

ಅನಾದಿ ಕಾಲದಿಂದಲೂ ವೇದ ಭೂಮಿಯಾಗಿರುವ ಭಾರತ ಸಾರಿದ್ದು ಅದ್ವೈತ ಸಿದ್ಧಾಂತವನ್ನೇ. 

ವೇದಗಳ ಅದ್ವೈತ ಸಾರವನ್ನು ವೇದವ್ಯಾಸರಿಂದ ಯಾಜ್ಞವಲ್ಕ್ಯವರೆಗೂ ಸಾರಿದ್ದಾರೆ, ವೇದಾಂತ ಸಿದ್ಧಾಂತದ ಅದ್ವೈತವನ್ನು ದೃಢವಾಗಿ ಪ್ರತಿಪಾದಿಸಿದ್ದಾರೆ. 

ಅದ್ವೈತ ಸಿದ್ಧಾಂತ ವೇದ-ಉಪನಿಷತ್ ಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಕಾಲಕ್ರಮೇಣ ಧರ್ಮಕ್ಕೆ ಗ್ಲಾನಿಯುಂಟಾದಾಗ ಪಂಡಿತರೂ ವಿದ್ವಾಂಸರು ತಪ್ಪಾಗಿ ಅರ್ಥೈಸಿಕೊಂಡು ಅದ್ವೈತವನ್ನು ಮರೆತರು. .

ಜ್ಞಾನ ಮಾರ್ಗಕ್ಕಿಂತ ಕರ್ಮಕಾಂಡಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಶೃತಿ (ವೇದ)ಯ ಸಿದ್ಧಾಂತದ ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾದಂತೆಲ್ಲಾ ಧರ್ಮಕ್ಕೂ ಗ್ಲಾನಿಯುಂಟಾಗಿತ್ತು. 

ಮೂಲ ತತ್ವವನ್ನೇ ಮರೆತು ಜಡವಾಗುತ್ತಿದ್ದ ಭಾರತವನ್ನು, ಭಾರತದ ತತ್ವವನ್ನು ಪುನಃ ಸ್ಥಾಪಿಸಲು, ಶೃತಿ ಸಾರವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸುವ ಜ್ಞಾನಿಯ ಅಗತ್ಯತೆ ಶಂಕರರ ಕಾಲದಲ್ಲಿ ಅತ್ಯವಶ್ಯಕವಾಗಿತ್ತು. 

ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವ ಕೆಲಸವನ್ನು ಶಂಕರರು ಸಮರ್ಥವಾಗಿ ಮಾಡಿದರೇ ಹೊರತು ಹೊಸ ಸಿದ್ಧಾಂತವನ್ನು ತಾವಾಗಿಯೇ ಸೃಷ್ಟಿಸಿ ಅದನ್ನು ಪ್ರಚಾರ ಮಾಡಲಿಲ್ಲ. ಹಾಗಾಗಿಯೇ ಶಂಕರರ ಸಿದ್ಧಾಂತ ಇಂದಿಗೂ, ಎಂದಿಗೂ ಅಪ್ರಕಂಪ್ಯವಾಗಿ ಉಳಿಯಲು ಸಾಧ್ಯವಾಗಿದೆ. 

ಶಂಕರ ಭಗವತ್ಪಾದರ ಗುರುಗಳಾಗಿದ್ದ ಗೌಡಪಾದರೇ “ ಮಾಯಾಮಾತ್ರಂ ಇದಂ ದ್ವೈತಂ, ಅದ್ವೈತಂ ಪರಮಾರ್ಥತಃ” ಎಂದು ಹೇಳಿದ್ದರು. 

ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಸಾಂಖ್ಯಾದಿಗಳು ಪ್ರತಿಪಾದಿಸಿದ್ದ ದ್ವೈತದಲ್ಲೇ ಮುಳುಗಿದ್ದ ಪಂಡಿತರು, ಶೃತಿಯ ಸಾರವನ್ನು ತಪ್ಪಾಗಿ ಅರ್ಥೈಸಿಕೊಂಡು ಕರ್ಮಕಾಂಡಕ್ಕೇ ಹೆಚ್ಚಿನ ಮಹತ್ವ ನೀಡಿ ಜ್ಞಾನ ಮಾರ್ಗವನ್ನು ನಿರಾಕರಿಸಿದ್ದರು. 

ಅಂದರೆ ವೇದಗಳಲ್ಲಿ ಹೇಳಿದ ಒಂದು ಹಂತವನ್ನು ಬಿಟ್ಟು ಮುಂದಕ್ಕೆ ಹೋಗದೇ ಜಡವಾಗಿ ಅಂಟಿಕೊಂಡು ಕರ್ಮಕಾಂಡದಿಂದ ಮೋಕ್ಷ ಪ್ರಾಪ್ತಿ ಎಂಬ ಭ್ರಮೆಯಲ್ಲಿದ್ದರು. 

ಅದನ್ನು ಕಳಚಿದ್ದೇ ಶಂಕರರು. ಶಂಕರರು ಕೇವಲ ಅಜ್ಞಾನವನ್ನಷ್ಟೇ ಕಳೆಯಲಿಲ್ಲ. ವಿಷಕಂಠ ಹಾಲಾಹಲವನ್ನು ತಾನು ಸೇವಿಸಿ ಅಮೃತವನ್ನು ನೀಡಿ ದೇವತೆಗಳನ್ನು, ಸೃಷ್ಟಿಯನ್ನು ರಕ್ಷಿಸಿದಂತೆ, ಬಂದ ಕಷ್ಟಗಳನ್ನೆಲ್ಲಾ ಎದುರಿಸಿ ಅಜ್ಞಾನದ ರೂಪದಲ್ಲಿ ಭಾರತದ ಸನಾತನ ಧರ್ಮಕ್ಕೆ ಎದುರಾಗಿದ್ದ ಅಪಾಯವನ್ನೂ ಕಳೆದರು. 

ಸನಾತನ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿ, ಅದ್ವೈತದ ಸುಧೆಯನ್ನು ಅನುಗ್ರಹಿಸಿದರು. 

ಆದರೆ ಪ್ರಸ್ತುತ ನಾವೆಲ್ಲಾ ಎಷ್ಟು ಅಜ್ಞಾನಿಗಳಾಗಿದ್ದೇವೆ ಎಂದರೆ ಸನ್ಯಾಸಿ ಎಂದರೆ ಕೇವಲ ಮೂಗು ಹಿಡಿದು ತಪಸ್ಸು ಮಾಡುವುದು ಅಥವಾ ಲೋಕ ವ್ಯವಹಾರಗಳಿಂದ ದೂರವಿದ್ದುಬಿಡುವುದು ಅಥವಾ ಒಂದು ವ್ಯವಸ್ಥೆಯಿಂದ ದೂರ ಇರುವುದು ಎಂಬ ಭಾವನೆ ಗಟ್ಟಿಯಾಗುತ್ತಿವೆ. 

ಆದರೆ ಭಾರತದ ಉಸಿರಾಗಿರುವ ತರ್ಕಬದ್ಧ ವಿಚಾರ ಮಂಡನೆ ಅಂದರೆ ಲಾಜಿಕ್ ನಲ್ಲಿ ನಮ್ಮ ಸನಾತನ ಧರ್ಮ ಅದೆಷ್ಟು ಮುಂದುವರೆದಿತ್ತು ಎನ್ನುವುದಕ್ಕೆ ಶಂಕರರು ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ. 

ಎಷ್ಟರ ಮಟ್ಟಿಗೆ ಎಂದರೆ ಸಾವಿರ ವರ್ಷಗಳು ಕಳೆದರೂ ಅವರ ತರ್ಕಬದ್ಧ ಮಂಡನೆ ಈ ಕ್ಷಣಕ್ಕೂ ಮಾದರಿಯಾಗುತ್ತದೆ. ವಿರೋಧಿಗಳೂ ಸಹ ತಮ್ಮ ವಾದದ ಸೌಧ ಕಟ್ಟುವುದಕ್ಕೆ ಶಂಕರರನ್ನೇ ಅಡಿಪಾಯವನ್ನಾಗಿರಿಸಿಕೊಳ್ಳುತ್ತಾರೆ. 

ಒಂದು ವಿಷಯದ ಬಗ್ಗೆ ಎರಡು ಪಕ್ಷಗಳ ನಡುವಿನ ವಾದ ಎಂದರೆ ಶಂಕರರು-ಮಂಡನ ಮಿಶ್ರರ ನಡುವಿನ ವಾದ ಸರಣಿಯೇ ಇಂದಿಗೂ ಮಾದರಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನಕ್ಕೆ ಸೂಕ್ತ ಉದಾಹರಣೆ. 

ನಾವೆಲ್ಲಾ ಯೂತ್ ಐಕಾನ್ ಎಂದು ಪ್ರತಿ ಜನವರಿ 12 ರಂದು ಆರಾಧಿಸುವ ವಿವೇಕಾನಂದರು ಸಹ  ಶಂಕರಭಗವತ್ಪಾದರ ಕುರಿತು ಹೀಗೆ ಹೇಳಿದ್ದಾರೆ  “In Shankaracharya we saw tremendous intellectual power, throwing the scorching light of reason upon everything. We want today that bright sun of intellectuality joined with the heart of Buddha”, 

ಅಂದರೆ “ಶಂಕರಭಗವತ್ಪಾದರು ಪ್ರಚಂಡ ಬೌದ್ಧಿಕ ಶಕ್ತಿಯನ್ನು ಹೊಂದಿದ್ದರು, ನಮಗೆ ಈಗ ಅಗತ್ಯವಿರುವುದು ಶಂಕರರ ರೀತಿಯ ಬುದ್ಧಿಮತ್ತೆ ಹಾಗೂ ಬುದ್ಧನ ರೀತಿಯ ಪ್ರೀತಿ” ಎಂದರ್ಥ.

ಅಷ್ಟೇ ಏಕೆ ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದ ರಾಮಕೃಷ್ಣ ಪರಮಹಂಸರಿಗೂ ಸಹ ಪ್ರೇರಕ ಶಕ್ತಿಯಾಗಿದ್ದದ್ದು ಇದೇ ಶಂಕರ ಭಗವತ್ಪಾದರು. 

ಇಂದು ಇಡೀ ಭಾರತವೇ ಯೂತ್ ಐಕಾನ್ ಎಂದು ಮೆಚ್ಚುವ ವಿವೇಕಾನಂದರಂತಹ ಧೀಶಕ್ತಿಯುಳ್ಳ ಸನ್ಯಾಸಿಗೇ ಆರಾಧ್ಯ ಮೂರ್ತಿಯಾಗಿದ್ದವರು 12 ಶತಮಾನಗಳ ಹಿಂದಿನ ಶಂಕರ ಭಗವತ್ಪಾದರು! 

ಅಲ್ಲವೇ? 8 ವರ್ಷದ ಬಾಲ ಸನ್ಯಾಸಿ. 12 ಶತಮಾನಗಳ ಹಿಂದೆ ಯಾವ ಸಂಚಾರ ವ್ಯವಸ್ಥೆ? ಕೇರಳದ ಕಾಲಟಿಯೆಲ್ಲಿ? ನರ್ಮದಾ ನದಿಯ ತಟದ ಗುಹೆಯೆಲ್ಲಿ? ಯಾವ ನೆರವು? ಯಾವ ಅರ್ಥವ್ಯವಸ್ಥೆ? ಬುದ್ಧಿ ಚಿಗುರೊಡೆಯುವ ವಯಸ್ಸಿನಲ್ಲೇ ಗುರುವನ್ನು ಅರಸಿ ಹೊರಟರಲ್ಲಾ ಬಾಲ ಸನ್ಯಾಸಿ ಶಂಕರರು ಅವರ ಧೀರೋದಾತ್ತ ಮನಸ್ಥಿತಿ, ವ್ಯಕ್ತಿತ್ವವನ್ನು ಬಣ್ಣಿಸುವುದೆಂತು? ಪದಪುಂಜಗಳು ಸಾಲದೇ ನತಮಸ್ತಕರಾಗುತ್ತೇವೆ ಅಷ್ಟೇ! 

ಶಂಕರರು ತಮ್ಮ ಗುರು ಗೋವಿಂದ ಭಗವತ್ಪಾದರನ್ನು ಸಂದರ್ಶಿಸಿ ತಮ್ಮನ್ನು ಭವ ಸಾಗರದಿಂದ ಮುಕ್ತಗೊಳಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತಾರೆ.

ಆದರೆ ಇದಕ್ಕೆ ಪ್ರತಿಯಾಗಿ ” ಈ ಮರ್ತ್ಯ ಶರೀರದಿಂದ ಹೇಗೆ ಭವ ಸಾಗರದಿಂದ ಬಿಡುಗಡೆ ಹೊಂದುವೆ” ಎಂದು ಕೇಳುತ್ತಾರೆ ಗೋವಿಂದ ಭಗವತ್ಪಾದರು. 

ಗುರುಗಳ ಪ್ರಶ್ನೆಗೆ ಉತ್ತರಿಸಿದ್ದ ಶಂಕರರು ಜೀವನ್ಮರಣ ಶರೀರಕ್ಕೇ ಹೊರತು ಆತ್ಮಕ್ಕೆ ಅಲ್ಲ ಎಂದು ಹೇಳುತ್ತಾರೆ, 

ಗುರುಗಳನ್ನು ಆಶ್ರಯಿಸಿ ಅಧ್ಯಯನ ಮಾಡುವುದಕ್ಕೂ ಮುನ್ನವೇ ಇಂತಹ ಪಾರಮಾರ್ಥಿಕ ಉತ್ತರವನ್ನು ನೀಡುವಷ್ಟು ಜ್ಞಾನಿಗಳಾಗಿದ್ದರಲ್ಲಾ ಶಂಕರರು ಆದ್ದರಿಂದಲೆ ಅವರನ್ನು ಬುದ್ಧಿವಂತಿಕೆಯಲ್ಲಿ ಸೂರ್ಯನಿಗೆ ಹೋಲಿಸಿ ನಮಿಸಿದ್ದೇವೆ. ಆದ್ದರಿಂದಲೇ ಜಗತ್ತು ಶಂಕರರನ್ನು “ನಮಾಮಿ ಭಗವತ್ಪಾದಂ ಲೋಕಶಂಕರಂ, ಆರಾದ್ ಜ್ಞಾನದಭಿಸ್ತಿಭಿಹಿ ಪ್ರತಿಹತಶ್ಚನ್ದ್ರಾಯುತೆ ಭಾಸ್ಕರಹ ತಸ್ಮೈ ಶಂಕರ ಭಾನವೇ ತನುಮನೋ ವಾಭಿರ್ನಮಸ್ಕುರ್ಮಹೆ” ಎಂದು ಕೊಂಡಾಡಿದೆ. 

ಕೇವಲ ಕೊಂಡಾಡುವವರಿಗಷ್ಟೇ ಅಲ್ಲ, ಶಂಕರರು ತಮ್ಮನ್ನು ವಿರೋಧಿಸುವವರಿಗೂ ಕೊಂಡಾಡುವವರಷ್ಟೇ ಮುಖ್ಯವಾಗಿದ್ದಾರೆ ಅಥವಾ ಕೊಂಡಾಡುವವರಿಗಿಂತಲೂ ವಿರೋಧಿಸುವವರಿಗೆ ಸ್ವಲ್ಪ ಹೆಚ್ಚಾಗಿಯೇ ಮುಖ್ಯವಾಗಿದ್ದಾರೆ. 

ಏಕೆಂದರೆ ಶಂಕರರು ಸಂಪ್ರದಾಯಸ್ಥರಾಗಿದ್ದುಕೊಂಡೇ ಶಂಕರರು ಸಂಪ್ರದಾಯಸ್ಥರು ಮಾಡುತ್ತಿದ್ದ ತಪ್ಪುಗಳನ್ನು ವಿರೋಧಿಸಿದ್ದರು, ಕರ್ಮಠರಾಗಿದ್ದುಕೊಂಡೇ ಕರ್ಮಠರ ತಪ್ಪುಗಳನ್ನು ತಿದ್ದಿ ತೀಡಿದರು. 

ಸಾಂಖ್ಯರನ್ನು, ಇತರ ಪ್ರತಿಪಕ್ಷದ ವಿದ್ವಾಂಸರುಗಳನ್ನು ಸಾತ್ವಿಕ ಮಾರ್ಗದಲ್ಲಿ ವಿರೋಧಿಸಿ, ಮರ್ಯಾದೆಯಿಂದಲೆ ಮಣಿಸಿದ್ದರು. 

ಬೌದ್ಧರ ತಪ್ಪುಗಳನ್ನೂ ತಿದ್ದಿ ಬುದ್ಧಿ ಹೇಳಿದರು. ವೇದಗಳ ಚೌಕಟ್ಟುಗಳನ್ನು ದಾಟದೇ, ವೇದದ ಪರಮ ತತ್ವಕ್ಕೆ ಚ್ಯುತಿ ಬಾರದಂತೆ ಅದ್ವೈತ ಸಿದ್ಧಾಂತವನ್ನು ಸಾರಲು ಅಂದಿನ ಜನರು ವಿಧಿಸಿದ್ದ ಕಟ್ಟುಪಾಡುಗಳನ್ನು ಮೀರಿದರು. 

ತಾವೊಬ್ಬರೇ ಒಂದು ಪಕ್ಷ ಉಳಿದವರೆಲ್ಲಾ ಒಂದು ಪಕ್ಷ ಎಂಬಂತಿದ್ದಾಗಲೂ ಸಂಚಾರ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಪ್ರತಿ ನಿತ್ಯವೂ ಯಾತ್ರೆ ಕೈಗೊಂಡರು.

ಭಾರತ ದೇಶವನ್ನು ಸುತ್ತಿ, ವಾದ ಮಾಡಿ ಅನೇಕ ದುರಹಂಕಾರಿ ವಿದ್ವಾಂಸರು ತಮ್ಮ ತಪ್ಪನ್ನು ತಾವೇ ಅರ್ಥಮಾಡಿಕೊಳ್ಳುವಂತೆ,  ಜ್ಞಾನ ಮಾರ್ಗದ ಮೂಲಕವೇ ಮೋಕ್ಷ ಪ್ರಾಪ್ತಿ ಎಂಬುದನ್ನು ಒಪ್ಪಿ ಜಿತೋಸ್ಮಿ ಎನ್ನಿಸಿದ್ದರು. 

ಕರ್ಮಕಾಂಡದಲ್ಲಿ ಅಪ್ರಕಂಪ್ಯವಾದ ನಂಬಿಕೆ ಹೊಂದಿದ್ದ ಮಂಡನ ಮಿಶ್ರರಂತಹ ಪಂಡಿತರನ್ನು ಶಿಷ್ಯರನ್ನಾಗಿಸಿಕೊಂಡರು. 

ಕೇವಲ 32 ವರ್ಷಗಳಲ್ಲಿನ ಜೀವಿತಾವಧಿಯಲ್ಲಿ ಭಾರತದ ಸನಾತನ ಧರ್ಮದ ಸತ್ವವನ್ನು ಪುನಃ ಪ್ರತಿಷ್ಠಾಪಿಸಿದ ಶಂಕರರಲ್ಲದೇ ಇಂದಿನ ಯುವ ಪೀಳಿಗೆಗೆ, ವಿವೇಕಾನಂದರು ಹೇಳಿದಂತೆ ಭಾರತಕ್ಕೆ ಅಗತ್ಯವಿರುವ ತೀಕ್ಷ್ಣ ಬುದ್ಧಿವಂತಿಕೆಗೆ ಶಂಕರರಲ್ಲದೇ ಮತ್ಯಾರು ತಾನೆ ಪ್ರೇರಕ ಶಕ್ತಿಯಾಗಬಲ್ಲರು? 

ಭಾರತ ಎದುರಿಸುತ್ತಿರುವ ಬೌದ್ಧಿಕ ದಾಸ್ಯ, ವಿಸ್ಮೃತಿಯಿಂದ ಹೊರಬರಲು ಶಂಕರರಲ್ಲದೇ ಮತ್ಯಾರು ತಾನೆ ಪ್ರೇರೇಪಿಸಬಲ್ಲರು?

ಇಷ್ಟಕ್ಕೂ ನಾವೇಕೆ ಶಂಕರರಿಗೆ ಕೃತಜ್ನರಾಗಿರಬೇಕು ಅಥವಾ ಗೌರವಿಸಬೇಕೆಂದರೆ ಅವರು ಜೀವಿಸಿ- ಮುಕ್ತರಾದ ಸಾವಿರ ವರ್ಷಗಳು ಕಳೆದರೂ ನಾವು ಧರ್ಮದ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನೂ ಎದುರಿಸದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿ ಹೋಗಿದ್ದಾರೆ. ಸಾವಿರ ವರ್ಷಗಳು ಕಳೆದರೂ ಧರ್ಮಕ್ಕೆ ವಿಪ್ಲವ ಬರದಂತಹ ವಾತಾವರಣ ನಿರ್ಮಿಸಿದ್ದರು. 

ಇನ್ನು ಕೊನೆಯದಾಗಿ, ಸಾ.ಕೃ ರಾಮಚಂದ್ರರಾಯರಂತಹ ವಿದ್ವಾಂಸರು ತಮ್ಮ ದರ್ಶನ ಪ್ರಬಂಧದಲ್ಲಿ ಶಂಕರರ ಬಗ್ಗೆ ಹೀಗೆ ಬರೆಯುತ್ತಾರೆ, “ನಾಡಿನ ಮೇಧಾವಿಗಳಲ್ಲಿ, ಮಾರ್ಗದರ್ಶಕರಲ್ಲಿ ಬುದ್ಧನನ್ನು ಬಿಟ್ಟರೆ ಶ್ರೀಶಂಕರರದ್ದೆ ಅಗ್ರಸ್ಥಾನ. ಅವರ ಬುದ್ಧಿಶಕ್ತಿ, ವಿಚಾರನೈಪುಣ್ಯ, ಸಂಪ್ರದಾಯಶ್ರದ್ಧೆ, ಸಮನ್ವಯ ಬುದ್ಧಿ, ಲೋಕಾನುಗ್ರಹ ದೃಷ್ಟಿ, ಪ್ರತಿಪಾದನಾ ಸಾಮರ್ಥ್ಯ ಇವೆಲ್ಲವೂ ಅನಾದೃಶ್ಯವಾದುವು. ಅವರ ನಂತರ ತೋರಿಕೊಂಡ ಯಾವ ಪಂಥದ ಆಚಾರ್ಯರಾಗಲಿ ವ್ಯಾಖ್ಯಾನಕಾರರಾಗಲಿ ಅವರ ಬರಹಗಳನ್ನು ಅಲ್ಲಗಳೆಯುವಂತಿರಲಿಲ್ಲ. ಅವರನ್ನು ಅನುಸರಿಸಿದವರಿಗೂ ವಿರೋಧಿಸಿದವರಿಗೂ ಅವರು ಸಮನಾಗಿಯೇ ಉಪಜೀವ್ಯರು! ವೇದಾಂತ ಸಂಪ್ರದಾಯ ಸ್ಪಷ್ಟವಾದುದು ಅವರ ಕಾಲದಲ್ಲಿಯೇ. ಅವರಿಂದಲೇ. ಮುಂದೆ ಒಂದು ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದ ಮೇಲೂ ಅವರ ಈ ನಾಡಿದ ಎಲ್ಲರ ನೆನಪಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ”. 

ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. 

ಇಂದು ಶಂಕರ ಜಯಂತಿ.ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದರೂ ಅವರ ಸಿದ್ಧಾಂತ ಅಚ್ಚಳಿಯದೇ ಉಳಿದುಕೊಂಡಿದೆ ಎಂದರೆ, ಶಂಕರರಿಲ್ಲದಿದ್ದಿದ್ದರೆ ಯಾವ ಸನಾತನ ಧರ್ಮದ ಅನುಯಾಯಿಗಳು ಇಂದು “ಹಿಂದೂ” ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ಇಂದಿಗೆ ವೇದಾಂತ ತತ್ವ ಎಂದರೆ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ವೇದಾಂತ ತತ್ವ ಎಂದರೇನು ಎಂಬುದೇ ಅರ್ಥವಾಗದೇ ಇದ್ದಿದ್ದರೆ ಇತ್ತೀಚಿನ ಶತಮಾನಗಳಲ್ಲಿ ನಾವು ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳು, ವಿವೇಕಾನಂದರಂತಹವರನ್ನೂ ಕಾಣಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ. 

ಅಷ್ಟೇ ಏಕೆ ಅಸಲಿಗೆ ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ, ಭಾರತದ ಸನಾತನ ಧರ್ಮ ಜೀವಂತವಾಗಿದ್ದರೆ ಅದಕ್ಕೆ ಶಂಕರರ ಕೊಡುಗೆ ಅಪಾರ.  ಹಾಗಾಗಿಯೇ ಸಾವಿರ ಅಲ್ಲ ಮತ್ತೂ ಸಾವಿರ ವರ್ಷ ಕಳೆದರೂ ಶಂಕರರು ಪ್ರಸ್ತುತ

Leave a Comment

Your email address will not be published. Required fields are marked *